ಆನೇಕಲ್: ಸಂಘ –ಸಂಸ್ಥೆಗಳು ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಅವಶ್ಯ ಇದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತರ ನೆರವಿಗೆ ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘ ಮುಂದಾಗಿರುವುದು ಅರ್ಥಪೂರ್ಣವಾಗಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ಅಭಿನಂದಿಸಿದರು.
ಅವರು ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಆಶಾ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ಮತ್ತು ದಿನಸಿ ವಿತರಿಸಿ ಮಾತನಾಡಿದರು.
ವಿಶ್ವದ ಬಲಿಷ್ಠ ರಾಷ್ಟ್ರಗಳು ಕೊರೊನಾ ಹೊಡೆತಕ್ಕೆ ಬಲಿಯಾಗಿ ತೀವ್ರ ಆರ್ಥಿಕಕುಸಿತ ಕಂಡಿವೆ. ಇಂತಹ ಸಂದರ್ಭದಲ್ಲೂ ದೇಶದಲ್ಲಿ ಜನರು ದಿಟ್ಟತನದಿಂದ ಕೊರೊನಾ ಸೋಂಕು ಹರಡದಂತೆ ತಡೆಯಲು ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗಳಿಗೆ ತೆರಳಿ ಜನರ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಬರದಂತೆ ರಕ್ಷಿಸುವ ಸಲುವಾಗಿ ಹೆಲ್ತ್ ಕಿಟ್ ಸಾಮಗ್ರಿ ನೀಡಿರುವುದು ಉಪಯುಕ್ತವಾಗಿದೆ ಎಂದರು.
ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಎ.ಪ್ರಸಾದ್ ಮಾತನಾಡಿ, ಸಮೀಕ್ಷೆಗಾಗಿ ಆಶಾ ಕಾರ್ಯಕರ್ತೆಯರು ಆರೋಗ್ಯ ಲೆಕ್ಕಿಸದೆ ಎಲ್ಲ ಮನೆಗಳಿಗೂ ಭೇಟಿ ನೀಡುತ್ತಿದ್ದಾರೆ. ಆದರೆ, ಅವರ ಸುರಕ್ಷತೆ ಮತ್ತು ಆರೋಗ್ಯ ಕೂಡ ಮುಖ್ಯ. ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘ ಆನೇಕಲ್ ತಾಲ್ಲೂಕಿನ ಆಶಾ ಕಾರ್ಯಕರ್ತರಿಗಾಗಿ ಆರೋಗ್ಯ ಮತ್ತು ದಿನಸಿ ಕಿಟ್ ನೀಡಿದೆ. ಆರೋಗ್ಯ ಕಿಟ್ನಲ್ಲಿ ಥಾರ್ಮಾಮೀಟರ್, ಕನ್ನಡಕ, ಮಾಸ್ಕ್, ಹ್ಯಾಂಡ್ಗ್ಲೌಸ್, ಸ್ಯಾನಿಟೈಜರ್ ನೀಡಲಾಗಿದೆ ಎಂದರು.
ವೈಜ್ಞಾನಿಕವಾಗಿ ಪರೀಕ್ಷಿಸಲಿ ಎಂಬ ಉದ್ದೇಶದಿಂದ ಥರ್ಮಾಮೀಟರ್ ನೀಡಲಾಗಿದೆ. ಇದರ ಬಳಕೆಯ ಬಗ್ಗೆ ನಾರಾಯಣ ಹೃದಯಾಲಯದ ತಜ್ಞರಿಂದ ಮಾರ್ಗದರ್ಶನ ನೀಡಲಾಗಿದೆ. ಬೊಮ್ಮಸಂದ್ರದಲ್ಲಿ ಆರೋಗ್ಯ ಇಲಾಖೆಗೆ ಮಂಜೂರಾಗಿರುವ ನಿವೇಶನದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಿಸಿಕೊಡಲು ಕೈಗಾರಿಕಾ ಮಾಲೀಕರ ಸಂಘ ಬದ್ಧವಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.
ಕೈಗಾರಿಕಾ ಮಾಲೀಕರ ಸಂಘ ಕಳೆದ 25 ದಿನಗಳಿಂದ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿದೆ. 8ಸಾವಿರ ಆಹಾರದ ಕಿಟ್ಗಳನ್ನು ನೀಡಲಾಗಿದೆ ಎಂದರು.
ಕೈಗಾರಿಕಾ ಮಾಲೀಕರ ಸಂಘದ ಕಾರ್ಯದರ್ಶಿ ನರೇಂದ್ರ ಕುಮಾರ್, ಖಜಾಂಚಿ ಸಂಜೀವ್ ಸಾವಂತ್, ಪದಾಧಿಕಾರಿಗಳಾದ ನೀಲಕಂಠಯ್ಯ, ಮುರಳಿ, ಜನಾರ್ಧನ್, ಮಲ್ಲಿಕಾರ್ಜುನ್, ವಾಸು, ಸತೀಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಕೆ.ರಮೇಶ್, ವೈದ್ಯರಾದ ಡಾ.ನಾಗರಾಜರಶೆಟ್ಟಿ, ಡಾ.ಸೀಮಾ ಇದ್ದರು.