ದೊಡ್ಡಬಳ್ಳಾಪುರ: ಜಾಗತಿಕವಾಗಿ ಹಲವು ಕಾರಣಗಳಿಗಾಗಿ ಕೀಟ ಹಾಗೂ ಚಿಟ್ಟೆಗಳ ಸಂತತಿ ಕ್ಷೀಣಿಸುತ್ತಿದೆ. ನಗರ ಪರಿಸರವೂ ಇದಕ್ಕೆ ಹೊರತಲ್ಲ.ಈ ನಿಟ್ಟಿನಲ್ಲಿ ಸದ್ಯ ಇರುವ ಕೀಟ, ಚಿಟ್ಟೆಗಳನ್ನಾದರೂ ಉಳಿಸಿಕೊಳ್ಳುವ ತುರ್ತು ಅಗತ್ಯ ಇದೆ. ಹೀಗಾಗಿಯೇ ನಗರ ಪ್ರದೇಶದಲ್ಲೂ ಜೀವ ವೈವಿಧ್ಯದ ಸಮೀಕ್ಷೆ ಕೆಲಸ ಉಪಯುಕ್ತವಾಗಲಿದೆ ಎನ್ನುತ್ತಾರೆ ಚಿಟ್ಟೆ ಹಾಗೂ ಕೀಟಗಳ ಬಗ್ಗೆ ವಿಶೇಷ ಅಧ್ಯಯನದಲ್ಲಿ ತೊಡಗಿರುವ ವೈ.ಟಿ.ಲೋಹಿತ್.
ದೊಡ್ಡಬಳ್ಳಾಪುರ ಇನ್ನು ಸಂಪೂರ್ಣವಾಗಿ ನಗರೀಕರಣವಾಗಿಲ್ಲ. ನಗರದ ಸುತ್ತಲು ಇನ್ನು ತೋಟ, ಹೊಲಗಳಲ್ಲಿ ರೈತರು ಬೇಸಾಯ ಮಾಡುತ್ತಿದ್ದಾರೆ. ನಗರದ ಒಳಗು ಸಹ ಪೂರ್ಣಪ್ರಮಾಣದಲ್ಲಿ ಕಟ್ಟಡಗಳು ನಿರ್ಮಾಣವಾಗಿಲ್ಲ. ಖಾಲಿ ನಿವೇಶನ, ಮನೆ ಅಂಗಳದಲ್ಲಿ ಸಾಕಷ್ಟು ಕೈ ತೋಟ ಕಾಣಬಹುದಾಗಿದೆ. ಈ ಎಲ್ಲಾ ಕಾರಣಗಳಿಂದ ತಾಲ್ಲೂಕಿನ ಇತರೆಡೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೀಟ, ಪತಂಗ, ದುಂಬಿ, ಚಿಟ್ಟೆಗಳು ನಗರದ ಒಳಗೂ ಕಂಡು ಬರುತ್ತಿವೆ.
ಸದ್ಯದ ಮಟ್ಟಿಗೆ ನಗರಸಭೆ ವ್ಯಾಪ್ತಿಯಲ್ಲಿ ಕಡ್ಡಿ ಜೇನು, ನೀಲಿಪಟ್ಟಿ ಜೇನು ಸೇರಿದಂತೆ ನಾಲ್ಕು ಜೇನು ಹುಳು ಪ್ರಬೇಧ ಕಂಡು ಬರುತ್ತವೆ. ಇದಲ್ಲದೇ ಜೇಡ, ಚಿಟ್ಟೆ, ಪತಂಗ, ಇರುವೆ, ನೊಣ, ಜೀರುಂಡೆ, ದುಂಬಿ ಹಾಗೂ ಏರೋಪ್ಲೇನ್ ಚಿಟ್ಟೆಗಳ ವೈವಿಧ್ಯವೇ ದೊಡ್ಡಬಳ್ಳಾಪುರ ನಗರದಲ್ಲಿದೆ ಎನ್ನುತ್ತಾರೆ ಕೀಟಗಳ ಅಧ್ಯಯನದಲ್ಲಿ ತೊಡಗಿರುವ ಚಿನ್ಮಯ್ ಮಳಿಯೇ.
ನಗರ ಪ್ರದೇಶದ ಜನ ಎಲ್ಲಾ ಕೀಟಗಳನ್ನು ಪೀಡೆಗಳು ಎಂದೇ ಪರಿಗಣಿಸಿ ಮನೆ ಅಂಗಳದಲ್ಲಿನ ಕೈತೋಟಕ್ಕೂ ಔಷಧ ಸಿಂಪರಣೆ ಮಾಡುತ್ತಾರೆ. ಇದು ತುಪ್ಪು ನಿರ್ಧಾರ. ಜೈವಿಕ ನಿಯಂತ್ರಣಕ್ಕೆ ಕೀಟಗಳೂ ಬದುಕುವಂತೆ ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ
ವೈ.ಟಿ.ಲೋಹಿತ್.
‘ನಮ್ಮ ಮನೆ ಅಂಗಳದ ಕೈತೋಟದಲ್ಲಿನ ಹಣ್ಣು, ತರಕಾರಿ ಹಾಗೂ ಹೂವಿಗೆ ಕೀಟಗಳ ಪರಾಗಸ್ಪರ್ಶ ಬೇಕು. ಸೊಳ್ಳೆಯಿಂದ ಹಿಡಿದು ಜೇನು ಹುಳುವಿನ ವರೆಗೂ ಬಹಳಷ್ಟು ಕೀಟಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸಿವೆ. ಬಹಳಷ್ಟು ಪಕ್ಷಿಗಳು ಕೀಟಹಾರಿಗಳು. ಧಾನ್ಯಹಾರಿ ಪಕ್ಷಿಗಳೂ ಸಹ ಹುಟ್ಟಿದ ಮರಿಗಳಿಗೆ ಪೌಷ್ಟಿಕಾಂಶ ಒದಗಿಸಲು ಕೀಟಗಳನ್ನು ತಿನ್ನಿಸುತ್ತವೆ. ಸರೀಸೃಪ, ಕೆಲ ಸಸ್ತನಿಗಳು, ಪಕ್ಷಿ, ಜೇಡ ಹಾಗೂ ಉಭಯವಾಸಿ ಜೀವಿಗಳಿಗೆ ಕೀಟವೆ ಪ್ರಮುಖ ಆಹಾರ. ಕೀಟಗಳು ಇಲ್ಲದಿದ್ದರೆ ಬೇರೆ ಜೀವಿಗಳು ನಶಿಸುತ್ತವೆ. ಪರಾಗಸ್ಪರ್ಶ ಕ್ರಿಯೆ ನಡೆಸಲು ಕೀಟಗಳು ಇಲ್ಲವಾದರೆ ಮನುಷ್ಯ ಹಾಗೂ ಇಡೀ ಜೀವ ಸಂಕುಲ ನಾಶವಾಗುತ್ತದೆ.
ಇರುವೆ, ಕಡಜ, ದುಂಬಿ, ಚಿಟ್ಟೆ, ಪತಂಗ, ಜೀರುಂಡೆ, ನೊಣ,ಮಿಡತೆ, ಗೆದ್ದಲು, ಏರೋಪ್ಲೇನ್ ಚಿಟ್ಟೆ ಇತ್ಯಾದಿ ಎಲ್ಲವೂ ಕೀಟಗಳೇ. ಕೀಟಗಳು ಜೀವಿಸಲು ಉದ್ಯಾನಗಳು, ಜಲಮೂಲಗಳು ಎಲ್ಲಾ ರೀತಿಯ ಪರಿಸರ ವ್ಯವಸ್ಥೆಯು ಇರಬೇಕು. ಆದರೆ, ಕೀಟನಾಶಕಗಳ ಬಳಕೆ, ಅತಿಯಾದ ನಗರೀಕರಣ, ಕೀಟಗಳ ಬಗ್ಗೆ ಇರುವ ಭಯ ಮತ್ತು ತಪ್ಪು ನಂಬಿಕೆ. ಕಳೆ ತೆಗೆಯುವುದು, ಬೆಂಕಿ ಹಚ್ಚಲಾಗುತ್ತಿದೆ. ಭೂಮಿಯ ಮೇಲಿನ ಎಲ್ಲಾ ಜೀವ ಸಂಕುಲವನ್ನು ತೂಕ ಹಾಕಿದರೆ, ಕೀಟಗಳ ತೂಕವೇ ಹೆಚ್ಚು. ನಗರಸಭೆ ವ್ಯಾಪ್ತಿಯಲ್ಲಿ ಜೀವ ವೈವಿಧ್ಯದ ಸರ್ವೆ ನಡೆಸಿದರಷ್ಟೇ ಸಾಲದು ಅಳಿವಿನ ಅಂಚಿನಲ್ಲಿರುವ ಕೀಟ ಸಂಕುಲವನ್ನು ಸಂರಕ್ಷಿಸುವ ಹಾಗೂ ನಗರದಲ್ಲಿ ಜೀವ ವೈವಿಧ್ಯವನ್ನು ಹೆಚ್ಚಿಸುವ ಕಡೆಗೂ ಸ್ಥಳೀಯ ಆಡಳಿತ ಆದ್ಯತೆ ನೀಡಬೇಕು ಎನ್ನುತ್ತಾರೆ ಪರಿಸರ ಪ್ರೇಮಿಗಳು.
ದೊಡ್ಡಬಳ್ಳಾಪುರನಗರಸಭೆ ವ್ಯಾಪ್ತಿಯಲ್ಲಿ ಕಾಣಸಿಗುವ ಕೀಟ ಪ್ರಬೇಧಗಳು
ಕೀಟಗಳು-ಪ್ರಬೇಧಗಳ ಸಂಖ್ಯೆ
ಜೇಡ- 28
ಚಿಟ್ಟೆ- 36
ಪತಂಗ-15
ಇರುವೆ- 16
ನೊಣ- 24
ಜೀರುಂಡೆ- 16
ದುಂಬಿ- 13
ಏರೋಪ್ಲೇನ್ ಚಿಟ್ಟೆ- 10
ಜೇನು- 4
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.