ವಿಜಯಪುರ: ‘ನಿತ್ಯ ಮೋಡ ಕವಿಯುತ್ತಿದೆ. ಮಳೆ ಹನಿ ಮಾತ್ರ ನೆಲಕ್ಕೆ ಬೀಳುತ್ತಿಲ್ಲ. ಹದಿನೈದು ದಿನಗಳಿಂದ ತಾಲ್ಲೂಕಿನಾಧ್ಯಂತ ಕಾಣುತ್ತಿರುವ ದೃಶ್ಯವಿದು. ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಮಳೆ ಮಾತ್ರ ಬರುತ್ತಿಲ್ಲ’ ಎಂದು ರೈತ ನಟರಾಜ್ ಆತಂಕ ವ್ಯಕ್ತಪಡಿಸಿದರು.
‘ಆರು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಕುಡಿಯುವ ನೀರು, ರಾಸುಗಳ ಮೇವಿಗೆ ಪರದಾಡುವಂತಾಗಿದೆ. ಈ ಬಾರಿಯಾದರೂ ಮಳೆಯಾಗುತ್ತದೆ, ಒಂದಷ್ಟು ಬೆಳೆ ಬೆಳೆದು ಜೀವನ ಸಾಗಿಸುವ ಯೋಚನೆಯಲ್ಲಿ ರಾಗಿ ಬಿತ್ತನೆ ಮಾಡಿದ್ದೇವೆ. ರಾಗಿ, ಕಾಳುಗಳು ಮೊಳಕೆಯೊಡೆದಿವೆ. ಆದರೆ ಮಳೆಯಿಲ್ಲದ ಕಾರಣ ಒಣಗುತ್ತಿವೆ. ಕೆಲವು ಕಡೆ ಬಿತ್ತನೆ ಮಾಡಿರುವ ರಾಗಿ ಮಳೆ ಕೊರತೆಯಿಂದ ಮೊಳಕೆಯೊಡೆದಿಲ್ಲ’ ಎಂದು ದುಗುಡ ಹಂಚಿಕೊಂಡರು.
ಮುಖಂಡ ಶ್ರೀನಿವಾಸ್ ಮಾತನಾಡಿ, ‘ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿ ಆಗುತ್ತಿದೆ. ನಮ್ಮಲ್ಲಿ ಅನಾವೃಷ್ಠಿಯಾಗಿದೆ. ನಮ್ಮ ಭಾಗದ ಕೆರೆಗಳಿಗೆ ನೀರು ಹರಿಸಿ, ರೈತರ ಬದುಕು ಹಸನುಗೊಳಿಸಿ ಎಂದು ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಹವಾಮಾನ ಇಲಾಖೆ ಈ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ. ಆದರೂ ಮುಂಗಾರು ಮಳೆ ಅವಧಿ ಮುಗಿಯುತ್ತಾ ಬಂದರೂ, ಬಹಳಷ್ಟು ರೈತರು ಬಿತ್ತನೆಯನ್ನೇ ಮಾಡಿಲ್ಲ’ ಎಂದು ಹೇಳಿದರು.
‘ನಮ್ಮಲ್ಲಿ ದಾಸ್ತಾನು ಬಂದಿದ್ದ ಬಿತ್ತನೆ ಬೀಜಗಳು, ಗೊಬ್ಬರಗಳನ್ನು ವಿತರಣೆ ಮಾಡಿದ್ದೇವೆ. ಶೇ 50ರಷ್ಟು ಬಿತ್ತನೆ ಆಗಿದೆ. ಸರಿಯಾಗಿ ಮೊಳಕೆ ಬರುತ್ತಿಲ್ಲ. ಶೇಂಗಾ, ತೊಗರಿ, ಅಲಸಂದೆ, ರಾಗಿ, ಕೆಲ ತಳಿಗಳಿಗೆ ಕಾಲಾವಕಾಶ ಇದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಬೇವಿನಕಟ್ಟಿ ಹೇಳಿದರು.