ಚನ್ನಪಟ್ಟಣ: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪ್ರತಿ ವರ್ಷ ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ನಾಶವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಸಾಹಿತಿ ವಿಜಯ್ ರಾಂಪುರ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೂರಣಗೆರೆ ಗ್ರಾಮದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ `ವನ ಸಂಪತ್ತು ಉಳಿಯಲಿ' ಪರಿಸರ ಜಾಗೃತಿ ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
‘ಒಂದೆಡೆ ಮಾನವ ಕಲ್ಯಾಣದ ಅಭಿವೃದ್ಧಿಯ ಹೆಸರಿನಲ್ಲಿ ಹಾಗೂ ಮತ್ತೊಂದೆಡೆ ಕಿಡಿಗೇಡಿಗಳು ಹಚ್ಚುವ ಬೆಂಕಿಯಿಂದ ಅರಣ್ಯ ನಾಶವಾಗುತ್ತಿದೆ. ಅಳಿವು-ಉಳಿವಿಗೆ ಅರಣ್ಯವೇ ಪ್ರಮುಖ ಕಾರಣ. ಜಾಗತಿಕ ತಾಪಮಾನ ಹೆಚ್ಚಳ, ಬರಗಾಲ, ಅಂತರ್ಜಲ ಮಟ್ಟ ಕುಸಿತ, ವಾಯು ಮಾಲಿನ್ಯ ಇತ್ಯಾದಿಗಳು ಸಂಭವಿಸಿ ಜೀವ ಸಂಕುಲದ ವಿನಾಶಕ್ಕೆ ನಾವೆ ನಾಂದಿ ಹಾಡುತ್ತಿದ್ದೇವೆ. ನಾವಿಂದು ಅಪಾಯದ ಅಂಚಿನಲ್ಲಿದ್ದು, ವನಸಂಪತ್ತನ್ನು ಉಳಿಸಿಕೊಳ್ಳುವ ಮೂಲಕ ಪರಿಸರ ಸಮತೋಲನಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಕೂರಣಗೆರೆ ಗ್ರಾಮದ ಮುಖಂಡ ಕೆ.ಎಚ್. ಕೃಷ್ಣಪ್ಪ ಮಾತಾನಾಡಿ, ಆಗ್ನಿ ಅವಘಡದಿಂದ ಅನೇಕ ಪ್ರಾಣಿ-ಪಕ್ಷಿ ಸಂಕುಲ ಔಷಧಿಯ ಗಿಡಮರಗಳು ಸುಟ್ಟು ಕರಕಲಾಗುತ್ತಿವೆ. ಅನಾದಿ ಕಾಲದಿಂದಲೂ ಅರಣ್ಯವನ್ನು ಸಂರಕ್ಷಿಸಿಕೊಂಡಿದ್ದ ಗ್ರಾಮೀಣರು ಈ ಬಗ್ಗೆ ಚಿಂತಿಸುವ ಮೂಲಕ ಪರಿಸರ ಸಂರಕ್ಷಣೆಯ ಹೊಣೆಯನ್ನು ಹೊರಬೇಕಾಗಿದೆ ಎಂದರು.
ಯುವ ಕವಿಗಳಾದ ಅಬ್ಬೂರು ಶ್ರೀನಿವಾಸ್, ತುಂಬೇನಹಳ್ಳಿ ಕಿರಣ್ ರಾಜ್, ಅಂಗಡಿ ಗೋಪಾಲ್, ಮಾಜಿ ಛೇರ್ಮನ್ ಸಿದ್ದಲಿಂಗಯ್ಯ, ಮಲ್ಲಿಕಾ, ರಾಮಚಂದ್ರು, ರಾಜು, ರಾಮು, ವೆಂಕಟಯ್ಯ ವಿಜಯ್ ಕುಮಾರ್, ಅಪ್ಪಾಜಣ್ಣ, ಕರಿಯ, ರವಿ, ಪ್ರಕಾಶ್, ಮನೋಜ್ ಗೌಡ ಹಾಜರಿದ್ದರು. ಪರಿಸರ ಜಾಗೃತಿ ಗೀತೆಗಳನ್ನು ಹಾಡಲಾಯಿತು.