ವಿಜಯಪುರ: ಸ್ವಾರ್ಥಕ್ಕಾಗಿ ಮನುಷ್ಯಮರಗಿಡಗಳನ್ನು ಕಡಿಯುವ ಮೂಲಕ ಪರಿಸರ ಹಾಳು ಮಾಡುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಈಗಾಗಲೇ ಅಲ್ಲಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳು ಎಲ್ಲೆಡೆ ಸಂಭವಿಸಲಿದೆ ಎಂದು ಬಿಕೆಎಸ್ ಪ್ರತಿಷ್ಠಾನ ಸಂಸ್ಥಾಪಕ ಬಿ.ಕೆ.ಶಿವಪ್ಪ ಹೇಳಿದರು.
ಇಲ್ಲಿನ ಪ್ರವಾಸಿಮಂದಿರದ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಷ್ಟಾನದ ಮೂಲಕ ಪರಿಸರ ಸಂರಕ್ಷಣೆ ಜೊತೆಗೆ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗಿದೆ. ಪ್ರಕೃತಿ ನಮ್ಮಿಂದ ಏನನ್ನೂ ಬಯಸುವುದಿಲ್ಲ. ನಾವು ಪ್ರಕೃತಿಗೆ ಮಾಡುವ ಸಹಾಯವೆಂದರೆ ಅದನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು. ಇಂದು ಎಲ್ಲರೂ ಈ ಬಗ್ಗೆ ಯೋಚಿಸುತ್ತಲೇ ಇದ್ದಾರೆ. ಆದರೆ, ಜಾಗೃತಿ ಹೆಚ್ಚಾಗಬೇಕಿದೆ. ಅದೇ ನಾವು ಪ್ರಕೃತಿಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.
ಮುಖಂಡ ಮಹೇಶ್ ಮಾತನಾಡಿ, ಗಿಡಗಳನ್ನು ನೆಟ್ಟ ತಕ್ಷಣ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಅದನ್ನು ಒಂದು ಹಂತದವರೆಗೆ ಆರೈಕೆ ಮಾಡಿ ಜನ, ಜಾನುವಾರಿಗೆ ಬಲಿಯಾಗದಂತೆ ಕಾಪಾಡಬೇಕಿದೆ. ಇಂದು ಹಾಕಿರುವ ಗಿಡಗಳ ಪೋಷಣೆಗಾಗಿ ನಿಗಾ ವಹಿಸಿದರೆ ಅದೇ ನಾವು ಸಮಾಜಕ್ಕೆ ನೀಡುವ ಅತಿದೊಡ್ಡ ಕೊಡುಗೆಯಾಗಲಿದೆ ಎಂದರು.
ಪ್ರತಿಷ್ಠಾನದ ಸಂಚಾಲಕಿ ನವ್ಯಾ ಮಾತನಾಡಿ, ಮುಂದಿನ ಪೀಳಿಗೆಗೆ ಒಳ್ಳೆಯ ಬದುಕು ನೀಡುವ ನಿಟ್ಟಿನಲ್ಲಿ ಉತ್ತಮ ಪರಿಸರ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈಗ ನೀರಿಗಾಗಿ 1,800 ಅಡಿ ಕೊಳವೆ ಬಾವಿ ಕೊರೆದರೂ ನೀರು ಬರುವುದು ಅನುಮಾನವಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅತಿ ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದೇ ಕಾರಣ ಎಂದು ಹೇಳಿದರು.