ದೊಡ್ಡಬಳ್ಳಾಪುರ:ಪ್ರತಿನಿಧಿಗಳು ಮತ್ತು ಗ್ರಾಹಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದ ಎಲ್ಐಸಿ ಕಚೇರಿ ಮುಂಭಾಗ ಬುಧವಾರ ಭಾರತೀಯ ಜೀವ ವಿಮಾ ನಿಗಮದ ಜಂಟಿ ಕ್ರಿಯಾ ಸಮಿತಿಯಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಯಿತು.
1956ರಲ್ಲಿ ಭಾರತೀಯ ಜೀವ ವಿಮಾ ನಿಗಮವು ರಾಷ್ಟ್ರೀಕರಣಗೊಂಡು ಇಂದಿಗೆ 66ನೇ ವಾರ್ಷಿಕೋತ್ಸವ ಆಚರಿಸುತ್ತಿದೆ. ಆದರೆ, ಇಷ್ಟು ವರ್ಷಗಳು ಕಳೆದರೂ ಪ್ರತಿನಿಧಿಗಳ ಕಮಿಷನ್ ಪ್ರಾರಂಭದಷ್ಟೇ ಇದೆ ಎಂದುಎಲ್ಐಸಿ ಪ್ರತಿನಿಧಿಗಳು ದೂರಿದರು.
ಪಾಲಿಸಿದಾರರ ಪ್ರೀಮಿಯಂ ಮೇಲಿನ ಜಿಎಸ್ಟಿ ರದ್ದುಗೊಳಿಸಬೇಕು. ಪಾಲಿಸಿದಾರರ ಬೋನಸ್ ಮೊತ್ತ ಹೆಚ್ಚಿಸಬೇಕು. ಪಾಲಿಸಿದಾರರು ಹಾಗೂ ಪ್ರತಿನಿಧಿಗಳ ಸಾಲದ ಬಡ್ಡಿದರ ಕಡಿತಗೊಳಿಸಬೇಕು. ಪ್ರತಿನಿಧಿಗಳಿಗೆ ಗುಂಪು ವಿಮೆ, ಗ್ರ್ಯಾಚುಟಿ, ಕ್ಷೇಮನಿ ಗುಂಪು ವಿಮೆ, ವೈದ್ಯಕೀಯ ವಿಮೆ, ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರತಿನಿಧಿಗಳನ್ನು ವೃತ್ತಿಪರರನ್ನಾಗಿ ಗುರುತಿಸಿ ಗೌರವಿಸಬೇಕೆಂದು ಒತ್ತಾಯಿಸಿದರು.
ಬೇಡಿಕೆ ಈಡೇರದಿದ್ದರೆ ಮುಂದಿನ ಎರಡು ತಿಂಗಳ ಕಾಲ ಸತತವಾಗಿ ವಿವಿಧ ಹಂತದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಟಿ.ಕೆ. ಶ್ರೀನಿವಾಸ್, ಖಜಾಂಚಿ ಎಲ್.ಎಂ. ನಾರಾಯಣಸ್ವಾಮಿ, ವಿಭಾಗ–2ರ ಉಪಾಧ್ಯಕ್ಷ ಸೋಮಶೇಖರ್, ಕರ್ನಾಟಕ ರಾಜ್ಯ ಮುಖ್ಯ ವಿಮಾ ಸಲಹೆಗಾರ ವಿಭಾಗದ ಮಾಜಿ ಚೇರ್ಮನ್ ಆರ್.ಎಸ್. ನಾಯಕ್, ಟಿ.ಜಿ. ಮಂಜುನಾಥ್ ಹಾಗೂ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.