ವಿಜಯಪುರ: ಇಲ್ಲಿನ ಚನ್ನರಾಯಪಟ್ಟಣ ಸರ್ಕಲ್ನ ಕೆನರಾ ಬ್ಯಾಂಕ್ ಎಟಿಎಂ ಬಾಗಿಲು ಮುಚ್ಚಿರುವುದಿಲ್ಲ. ಭದ್ರತಾ ಸಿಬ್ಬಂದಿಯೂ ಇರುವುದಿಲ್ಲ. ಇಲ್ಲಿ ಬಂದು ಹಣ ಡ್ರಾ ಮಾಡುವ ಗ್ರಾಹಕರಿಗೆ ಸುರಕ್ಷತೆಯಿಲ್ಲದಂತಾಗಿದೆ ಎಂದು ಸ್ಥಳೀಯ ನಿವಾಸಿ ಸತೀಶ್ ಆರೋಪಿಸಿದ್ದಾರೆ.
ಒಬ್ಬರು ಹಣ ಡ್ರಾ ಮಾಡುವಾಗ ಬೇರೆಯವರು ಹೋಗಲು ಅವಕಾಶವಿರುವುದಿಲ್ಲ. ಆದರೂ, ಇಲ್ಲಿನ ಎಟಿಎಂ ನಲ್ಲಿ ಒಂದೇ ಬಾರಿಗೆ ನಾಲ್ಕೈದು ಮಂದಿ ಪ್ರವೇಶಿಸುತ್ತಿದ್ದಾರೆ. ಅಂತರ ಪಾಲಿಸುತ್ತಿಲ್ಲ. ಹಣ ತೆಗೆದುಕೊಳ್ಳಲು ಬರುವ ಗ್ರಾಹಕರು ಆತಂಕದಿಂದ ವ್ಯವಹರಿಸಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಟಿಎಂ ಒಳಗೆ ಚಲನ್ಗಳ ಕಸದ ರಾಶಿ ಬಿದ್ದಿದ್ದರೂ ಅದನ್ನು ಸ್ವಚ್ಛಗೊಳಿಸುತ್ತಿಲ್ಲ. ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಇಲ್ಲಿ ಭದ್ರತೆ ಒದಗಿಸಬೇಕು. ಬಾಗಿಲು ಸರಿಪಡಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.