ಚನ್ನಪಟ್ಟಣ: ಪಟ್ಟಣದ ಬಡಾಮಕಾನ್ನ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ 280ನೇ ಗಂಧ ಮಹೋತ್ಸವಕ್ಕೆ ಬುಧವಾರ ರಾತ್ರಿ ಅದ್ಧೂರಿ ಚಾಲನೆ ನೀಡಲಾಯಿತು.
ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಮುಸ್ಲಿಂ ಪವಿತ್ರ ಹಬ್ಬಗಳಲ್ಲಿ ಒಂದಾದ ಗಂಧ ಮಹೋತ್ಸವದ ಮೊದಲ ದಿನ ಬುಧವಾರ ರಾತ್ರಿ ಮಲಬಾರಿ ರಾತಿಬ್ ತಂಡದಿಂದ ದಮರಿ ಬಾರಿಸುವ ಕಾರ್ಯಕ್ರಮ, ಸೈಯದ್ ವಹೀದುರ್ ರೆಹಮಾನ್ ಅಪ್ಸರ್ ಬೇಗ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಗಪುರ್ ಮಡಿಕೆ ತಂಡದಿಂದ ಭಜನೆ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾತ್ರಿಯಿಡೀ ಮೆರವಣಿಗೆ ನಡೆಯಿತು.
ಬಡಾಮಕಾನ್ ದರ್ಗಾದಲ್ಲಿ ನಡೆಯುವ ಗಂಧ ಮಹೋತ್ಸವಕ್ಕೆ ಆಂಧ್ರಪ್ರದೇಶ,ತಮಿಳುನಾಡು,ಕೇರಳ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಮುಸ್ಲಿಮರು ಬರುವುದು ವಾಡಿಕೆ. ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಸಮಾಧಿ ದರ್ಶನ ಮಾಡಿ, ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಲಾಗುತ್ತದೆ.
ದೇಶದ ವಿವಿಧ ಭಾಗಗಳಿಂದ ಹೆಸರಾಂತ ಖವ್ವಾಲಿ ತಂಡಗಳು ಪಾಲ್ಗೊಂಡು ಜನರನ್ನು ರಂಜಿಸಲಿವೆ.
ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ 300ವರ್ಷಗಳ ಹಿಂದೆ ಇರಾಕ್ ರಾಜಧಾನಿ ಬಾಗ್ದಾದ್ನಿಂದ ದೇಶದ ಗುಜರಾತ್ ರಾಜ್ಯದ ಸೂರತ್ ಗೆ ಬಂದು ಕೆಲವು ತಿಂಗಳುಗಳ ಕಾಲ ವಾಸವಾಗಿದ್ದರು. ಆ ನಂತರ ವಿಜಾಪುರ ಮಾರ್ಗವಾಗಿ ಕರ್ನಾಟಕಕ್ಕೆ ಬಂದು ರಾಮನಗರ ತಾಲ್ಲೂಕು, ಜಾಲಮಂಗಲ ಬೆಟ್ಟದಲ್ಲಿ ಸುಮಾರು 7 ವರ್ಷಗಳ ಕಾಲ ನೆಲೆಗೊಂಡಿದ್ದರು.
ಇವರ ಮರಣ ನಂತರ ಮಂಟಪ ಕೆಡವಿ ಟಿಪ್ಪುಸುಲ್ತಾನ್ ನೂತನ ದರ್ಗಾ ನಿರ್ಮಿಸಿದ. ಈ ದರ್ಗಾ ಚನ್ನಪಟ್ಟಣದ ಬಡಾಮಕಾನ್ನಲ್ಲಿದ್ದು, 280ವರ್ಷಗಳಿಂದಲೂ ಇಲ್ಲಿ ಪ್ರತಿವರ್ಷ ಗಂಧಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಇಲ್ಲಿಮ ಪ್ರಮುಖ ವಿಶೇಷ.