ಆನೇಕಲ್: ಮಹಾಪುರುಷರು ಮತ್ತು ದಾರ್ಶನಿಕರ ಜಯಂತಿಗಳ ಆಚರಣೆ ಮೂಲಕ ಅವರನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ಪರಿಪಾಠ ಬೆಳೆಸುವುದು ಸಮಾಜಕ್ಕೆ ಉಪಯುಕ್ತವಾಗಿದೆ ಎಂದು ಅತ್ತಿಬೆಲೆ ಬಿಜೆಪಿ ಮಂಡಲ ಪ್ರಭಾರಿ ಎಸ್. ಮುನಿರಾಜು ತಿಳಿಸಿದರು.
ತಾಲ್ಲೂಕಿನ ಚಂದಾಪುರದ ಯಶಸ್ವಿನಿ ಮಹಿಳಾ ಒಕ್ಕೂಟದ ಸೇವಾಶ್ರಮಕ್ಕೆ ಅತ್ತಿಬೆಲೆ ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸೇವಾ ಸಪ್ತಾಹದ ಅಂಗವಾಗಿ ವಿವಿಧ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ಪಂಡಿತ ದೀನದಯಾಳ್ ಉಪಧ್ಯಾಯರ ಜನ್ಮ ದಿನಾಚರಣೆ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಅಂಗವಾಗಿ ಸೇವಾ ಕಾರ್ಯಗಳನ್ನು ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆ, ಸ್ವಚ್ಛತೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಸೇವಾ ಆಶ್ರಮದ ಮಕ್ಕಳಿಗೆ ಹಣ್ಣು, ಆಹಾರ ಧಾನ್ಯ ಮತ್ತು ಹೊದಿಕೆ ವಿತರಿಸಲಾಗಿದೆ ಎಂದು ಹೇಳಿದರು.
ಅತ್ತಿಬೆಲೆ ಮಂಡಲ ಬಿಜೆಪಿ ಒಬಿಸಿ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು. ಮುಖಂಡರಾದ ಮಂಜುನಾಥ್, ವಿಶ್ವನಾಥ್, ಜಗದೀಶಾಚಾರಿ, ಎಂ. ಸುಬ್ರಮಣಿ, ಮೋಹನ್, ಮಂಜುನಾಥ್, ಸುನೀಲ್ ಇದ್ದರು.