ದಾಬಸ್ಪೇಟೆ: ನೆಲಮಂಗಲ ತಾಲ್ಲೂಕಿನ ಬುಗಡಿಹಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ಓಡಾಡುತ್ತಾ ಜನರಲ್ಲಿ ಭಯ ಮೂಡಿಸಿದ್ದ ಕರಡಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬುಧವಾರ ರಾತ್ರಿ ಬಿದ್ದಿದೆ.
ಎರಡು ತಿಂಗಳಿಂದ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನೋಹಳ್ಳಿ, ಜಾಜೂರು, ಲಕ್ಷ್ಮೀಪುರ, ಬುಗಡಿಹಳ್ಳಿ, ಗೊಲ್ಲರಹಟ್ಟಿ, ಸುತ್ತಮುತ್ತಲ ಗ್ರಾಮಗಳಲ್ಲಿ ರಾತ್ರಿ ತಿರುಗಾಡುತ್ತಿತ್ತು. ಇದರಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದರು.
ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಅರಣ್ಯಾಧಿಕಾರಿಗಳು ಕರಡಿಯನ್ನು ಹಿಡಿಯಲು ಬುಗಡಿಹಳ್ಳಿಯ ವಸಂತ್ ಎಂಬುವವರ ಸೀಬೆ ತೋಟದಲ್ಲಿ ಬೋನು ಇಟ್ಟಿದ್ದರು. ಹಣ್ಣನ್ನು ತಿನ್ನಲು ಬಂದ ಕರಡಿ ಬೋನಿಗೆ ಬಿದ್ದಿದೆ.
ಜನರು ತಂಡೋಪತಂಡವಾಗಿ ಬಂದು ಕರಡಿಯನ್ನು ಕುತೂಹಲದಿಂದ ವೀಕ್ಷಿಸಿದರು. ಬೋನಿಗೆ ಬಿದ್ದ ಕರಡಿಯನ್ನು ಹೊಸಪೇಟೆಗೆ ತೆಗೆದುಕೊಂಡು ಹೋಗಿ ಬಿಟ್ಟು ಬರಲಾಗಿದೆ ಎಂದು ಅರಣ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.