ಹೊಸಕೋಟೆ: ಇಲ್ಲಿಯ ನಿಸರ್ಗ ಬಡಾವಣೆಯ ಟ್ರಕ್ ಟರ್ಮಿನಲ್ನಲ್ಲಿ ನಿಲ್ಲಿಸಿದ್ದ ಲಾರಿಗಳಲ್ಲಿ ಬುಧವಾರ ಬೆಳಗಿನ ಜಾವ ಡೀಸೆಲ್ ಕದಿಯಲು ಬಂದಿದ್ದ ವ್ಯಕ್ತಿಯನ್ನು ಲಾರಿ ಚಾಲಕರು ಮತ್ತು ಕ್ಲೀನರ್ಗಳು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಆ ವ್ಯಕ್ತಿ ಮೃತಪಟ್ಟಿದ್ದಾನೆ.
ಹೊಸಕೋಟೆ–ಮಾಲೂರು ರಸ್ತೆಯ ಟ್ರಕ್ ಟರ್ಮಿನಲ್ನಲ್ಲಿ ಸಾಲಾಗಿ ನಿಲ್ಲಿಸಿದ್ದ ಲಾರಿಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕದಿಯುವ ಜಾಲದ ನಾಲ್ವರ ಗುಂಪೊಂದು ಬಂದಿತ್ತು.
ಇದನ್ನು ಗಮನಿಸಿದ ಲಾರಿ ಚಾಲಕರು ಮತ್ತು ಕ್ಲೀನರ್ಗಳು ಹೊಂಚು ಹಾಕಿ ಕುಳಿತಿದ್ದರು. ಇದನ್ನು ಅರಿತ ಕಳ್ಳರ ತಂಡ ಪರಾರಿಯಾಗಿದ್ದು ಗುಂಪಿನಲ್ಲಿದ್ದ ಒಬ್ಬ ಚಾಲಕರು ಮತ್ತು ಕ್ಲೀನರ್ಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಹಿಗ್ಗಾಮುಗ್ಗ ಥಳಿಸಿ ಆಟೊದಲ್ಲಿ ಹೊಸಕೋಟೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಹಲ್ಲೆಯಿಂದ ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ. ಆತನ ಗುರುತು, ವಿಳಾಸ ಪತ್ತೆಯಾಗಿಲ್ಲ.
ಹಲ್ಲೆ ನಡೆಸಿದ ಆರೋಪದ ಮೇಲೆ ಲಾರಿ ಚಾಲಕರು ಮತ್ತು ಕ್ಲೀನರ್ಗಳನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದರು.