ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತಾಲ್ಲೂಕು ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ದೇವನಹಳ್ಳಿ ಮಿನಿ ವಿಧಾನಸೌಧದ ಮುಂಭಾಗ ರಸ್ತೆ ತಡೆ ನಡೆಸಿದರು.
ತಾಲ್ಲೂಕು ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ವಿಮಾನ ನಿಲ್ದಾಣಕ್ಕೆ ಭೂಮಿ ಸ್ವಾಧೀನ ಪಡಿಸಿಕೊಂಡ ಶೇ. 60 ರಷ್ಟು ರೈತರಿಗೆ ಪ್ರತಿ ಎಕರೆಗೆ ರೂ.ಐದು ಲಕ್ಷ ವಿತರಿಸಲಾಗಿದೆ. ಉಳಿದ 2,800 ಎಕರೆ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರಿಗೆ ಈವರೆವಿಗೂ ಯಾವುದೇ ಪರಿಹಾರ ನೀಡಿಲ್ಲ’ ಎಂದು ದೂರಿದರು.
ಸರ್ಕಾರ ನೀಡಿದ ಭರವಸೆಯಂತೆ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಈವರೆವಿಗೂ ಉದ್ಯೋಗ ನೀಡಿಲ್ಲ. ನಿವೇಶನ ವಿತರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿಶೇಷ ಭೂಸ್ವಾಧೀನ ಆದೇಶದಂತೆ ಪರಿಹಾರ ನೀಡಬೇಕು. ಈಗಾಗಲೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿ ವಶಪಡಿಸಿಕೊಂಡು ನೀಡಿರುವ ಪರಿಹಾರ ಮಾದರಿಯಲ್ಲಿ ವಿತರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ವೀರಣ್ಣ ಮಾತನಾಡಿ,‘ವಿಮಾನ ನಿಲ್ದಾಣಕ್ಕೆ ಅರಿ ಶಿನಕುಂಟೆ ಬಾವಪುರ, ಗಂಗಮುತ್ತನಹಳ್ಳಿ, ಅಣ್ಣೇಶ್ವರ, ಸಣ್ಣಯರ್ರಪ್ಪನ ಹಳ್ಳಿ, ದೊಡ್ಡಸಣ್ಣೆ, ಭುವನಹಳ್ಳಿ, ಯರ್ತಿಗಾನಹಳ್ಳಿ, ಮೈಲನಹಳ್ಳಿ, ಬೇಗೂರು, ಕಾಡ ಯರಪ್ಪನ ಹಳ್ಳಿ, ಹುಣಸೂರು, ಬೆಟ್ಟಕೋಟೆ ಗ್ರಾಮಗಳ ರೈತರ ಭೂಮಿ ಸ್ವಾಧೀನವಾಗಿದೆ. ಇದರಲ್ಲಿ 2600 ರೈತರು ಸಾಗುವಳಿಗಾಗಿ ಅರ್ಜಿ ಸಲ್ಲಿಸಿದ್ದರು.
ಆದರೆ ಕೇವಲ 600 ರೈತರ ಹೆಸರಿನ ಪಟ್ಟಿಯನ್ನು ಮಾತ್ರ ಅಂದಿನ ತಹಶೀಲ್ದಾರ್ ಸಿದ್ಧಪಡಿಸಿ ಉಳಿದ ರೈತರ ಹೆಸ ರನ್ನು ಕೈಬಿಟ್ಟಿದ್ದಾರೆ. ಇದರಿಂದ ರೈತರು ಬೀದಿ ಪಾಲಾ ಗಿದ್ದರೆ. ಅಲ್ಲದೇ ಸಾಗುವಳಿ ಪತ್ರ ಪಡೆದಿದ್ದ ರೈತರಿಗೆ ಕೇವಲ ಐದು ಲಕ್ಷ ಪರಿಹಾರ ನೀಡಲಾಗಿದೆ. ಈಗ ಒಂದು ಎಕರೆಗೆ ಇಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯವಿದೆ. ಆದ್ದರಿಂದ ಸರ್ಕಾರ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ದರಖಾಸ್ತು ಪೋಡಿ, ಪಹಣಿ ಮತ್ತು ಮ್ಯುಟೇಷನ್ ತಿದ್ದುಪಡಿ ಬಗ್ಗೆ ಉಪ ವಿಭಾಗಾ ಧಿಕಾರಿಗಳಿಗೆ ಸರ್ಕಾರ ಅಧಿಕಾರ ನೀಡಿದೆ. ಗ್ರಾಮೀಣ ಪ್ರದೇಶದ ರೈತರು ಪ್ರತಿನಿತ್ಯ ನಗರಕ್ಕೆ ಅಲೆಯುವಂ ತಾಗಿದೆ. ಆದ್ದರಿಂದ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರ್ಗೆ ನೀಡಬೇಕು ಎಂದು ಒತ್ತಾಯಿಸಿದರು.
ನಗರದ ಸುತ್ತಮುತ್ತ 18 ಕಿ.ಮೀ ಪುರಸಭೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಸಾಗುವಳಿದಾರರಿಗೆ ಭೂ ಮಂಜೂರಾತಿ ಮಾಡಬಾರದೆಂಬ ಆದೇಶವನ್ನು ರದ್ದು ಗೊಳಿಸಿ ಫಾರಂ ನಂ. 53ರಡಿಯಲ್ಲಿ ಅರ್ಜಿ ಹಾಕಲು ಅವಕಾಶ ಕಲ್ಪಿಸಿ ಬಾಕಿ ಇರುವ ಅರ್ಜಿಗಳನ್ನು ತ್ವರಿತ ವಾಗಿ ಇತ್ಯರ್ಥಗೊಳಿಸುವಂತೆ ಅವರು ಒತ್ತಾಯಿ ಸಿದರು. ಪ್ರಾಂತ ರೈತ ಮುಖಂಡ ಹನುಮಂತರಾಯಪ್ಪ ಮಾತನಾಡಿ, ‘ತಾಲ್ಲೂಕು ಕೇಂದ್ರದಲ್ಲಿ ಯಾವುದೇ ಸರ್ಕಾರ ಈವರೆವಿಗೂ ಎ.ಪಿ.ಎಂ.ಸಿ ಮಾರುಕಟ್ಟೆ ಕಲ್ಪಿಸಿಲ್ಲ ಇದರಿಂದ ರೈತರು ಬೆಳೆದ ಬೆಳೆಗಳು ಮತ್ತು ತರಕಾರಿ ಮಾರಾಟಕ್ಕೆ ನಗರ ಪ್ರದೇಶವನ್ನು ಅವಲಂಬಿ ಸಬೇಕಾಗಿದೆ. ಇದು ಸಾಗಾಣಿಕೆ ವೆಚ್ಚ ರೈತರಿಗೆ ಹೊರೆ ಯಾಗುತ್ತಿದೆ ಎಂದು ದೂರಿದರು.
ವಿಮಾನ ನಿಲ್ದಾಣ ವ್ಯಾಪ್ತಿಯನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿಸಿಕೊಂಡಿದ್ದು ಇದರ ಸಂಪ ನ್ಮೂಲವೆಲ್ಲಾ ಪಾಲಿಕೆಗೆ ಹೋಗುತ್ತಿದೆ. ಇದನ್ನು ರದ್ದು ಪಡಿಸಿ ದೇವನಹಳ್ಳಿ ಪುರಸಭೆಗೆ ವರ್ಗಾಯಿ ಸಬೇಕು ಎಂದು ಅವರು ಆಗ್ರಹಿಸಿದರು.
ರಸ್ತೆ ತಡೆ ನಡೆಸಿದ ನಂತರ ಹದಿನೈದು ಬೇಡಕೆಗಳ ಮನವಿ ಒಳಗೊಂಡ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸ ಲಾಯಿತು.
ಭೂಮಿತಾಯಿ ಹೋರಾಟ ಸಮಿತಿ ಅದಕ್ಷ ಗೋವಿಂದಪ್ಪ, ಪ್ರಾಂತ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕೃಷ್ಣವೇಣಿ, ಕಾರ್ಯದರ್ಶಿ ಸುಮಿತ್ರಮ್ಮ, ಪ್ರಾಂತ ರೈತ ಸಂಘದ ಅಲ್ಪಸಂಖ್ಯಾತ ಘಟಕದ ಸಬ್ದಾರ್ ಪಾಷಾ ಮತ್ತು ಸರ್ದಾರ್ ಪಾಷಾ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.