ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಯುವಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಗೋಕಾಕ ತಾಲ್ಲೂಕಿನ ಲಗಮೇಶ್ವರ ಗ್ರಾಮದ ಕುಮಾರ ಕಲ್ಲಪ್ಪ ಕೊಪ್ಪದ (23) ಆತ್ಮಹತ್ಯೆಗೆ ಯತ್ನಿಸಿದವರು. ಕ್ರಿಮಿನಾಶಕ ಸೇವಿಸಿ ನೆಲಕ್ಕೆ ಬಿದ್ದ ಯುವಕನನ್ನು ಪೊಲೀಸರು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಡಿಯುವ ನೀರಿನ ಬಾಟಲಿಯಲ್ಲಿ ಕ್ರಿಮಿನಾಶಕ ಹಾಕಿಕೊಂಡು ಬಂದಿದ್ದ ಯುವಕ, ಜಿಲ್ಲಾಧಿಕಾರಿಯನ್ನು ಭೇಟಿ ಆಗಬೇಕು ಎಂದು ವಿಚಾರಿಸಿದ್ದರು. ತುಸು ಹೊತ್ತು ಅತ್ತಿತ್ತ ಸುಳಿದಾಡಿ ಕ್ರಿಮಿನಾಶಕ ಕುಡಿದರು. ಘಟನೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ಯುವಕನ ಆರೋಗ್ಯ ಸುಧಾರಿಸಿದ ಮೇಲೆ ವಿಷಯ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಕೆಟ್ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದರು.