ಬೆಳಗಾವಿ: ‘ಜಿಲ್ಲೆಯ 16 ದೇವಸ್ಥಾನಗಳಿಗೆ ಆಡಳಿತಾಧಿಕಾರಿ ನೇಮಿಸಿ ಹೊರಡಿಸಿರುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರ ಗುರುಪ್ರಸಾದ್ ಗೌಡ ತಿಳಿಸಿದರು.
ನಗರದ ಅಂಬಾಬಾಯಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ವಿವಿಧ ದೇವಸ್ಥಾನಗಳ ವಿಶ್ವಸ್ಥರು, ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರ ಎಲ್ಲ ದೇವಸ್ಥಾನಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಆಡಳಿತಾಧಿಕಾರಿಗಳ ನೇಮಕಕ್ಕೆ ವಿಶ್ವಸ್ಥರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ವಿರೋಧವಿದೆ. ಇತರ ಧಾರ್ಮಿಕ ಕೇಂದ್ರಗಳಿಗೆ ಇರದ ಆಡಳಿತಾಧಿಕಾರಿ ನೇಮಕ ಹಿಂದೂ ದೇವಾಲಯಗಳಿಗೆ ಮಾತ್ರ ಏಕೆ?’ ಎಂದು ಕೇಳಿದರು.
ಅಂಬಾಬಾಯಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಚವಾಣ, ವಿವಿಧ ದೇವಸ್ಥಾನಗಳ ವಿಶ್ವಸ್ಥ ಮಂಡಳಿಯ ಗಜಾನನ ಮಹಾರಾಜ, ದಿನೇಶ ಪಟೇಲ, ರಮೇಶ ಸೊಂಟಕ್ಕಿ, ಬಾಲಚಂದ್ರ ಚೌಧರಿ, ಅನಿಲ ಚೌಧರಿ, ಹೃಷಿಕೇಷ ಗುರ್ಜರ, ಸುನೀಲ ಘಟವಟ ಇದ್ದರು.