ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಪ್ರಾಧ್ಯಾಪಕರಿಗೆ ಚಟುವಟಿಕೆ ಆಧಾರಿತ ಕಲಿಕೆ ಕಾರ್ಯಾಗಾರ ಆಯೋಜಿಸಲಾಗಿತ್ತು.
ಉದ್ಘಾಟಿಸಿದ ವಿಟಿಯು ಕುಲಸಚಿವ (ಮೌಲ್ಯಮಾಪನ) ಡಾ.ಸತೀಶ ಅಣ್ಣಿಗೇರಿ, ‘ಕಳೆದ ಒಂದು ದಶಕದಿಂದ ಕಲಿಕೆಯ ವಿಧಾನಗಳಲ್ಲಿ ಬಹಳಷ್ಟು ಸುಧಾರಣೆಗಳಿವೆ. ಪ್ರಾಧ್ಯಾಪಕರು ಚಟುವಟಿಕೆ ಆಧಾರಿತ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ವಿಷಯಗಳು ಸುಲಭವಾಗಿ ಮನದಟ್ಟಾಗುತ್ತವೆ’ ಎಂದು ತಿಳಿಸಿದರು.
‘ಇಂದಿನ ವಿದ್ಯಾರ್ಥಿಗಳು ಮೊಬೈಲ್, ಇಂಟರ್ನೆಟ್ ಮೊದಲಾದ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಕಲಿಕೆಯಲ್ಲಿ ನಿರಾಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಅವರು ಕಲಿಕೆಯಲ್ಲಿ ಆಸಕ್ತಿ ವಹಿಸಲು ಪ್ರಾಧ್ಯಾಪಕರು ಚಟುವಟಿಕೆ ಆಧಾರಿತ ಬೋಧನಾ ಕ್ರಮ ಅಳವಡಿಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಸವರಾಜ ಕಟಗೇರಿ, ‘ಚಟುವಟಿಕೆ ಆಧಾರಿತ ಕಲಿಕೆಯು ಜಗತ್ತಿನಲ್ಲಿಯೇ ಅತ್ಯುತ್ತಮ ಕಲಿಕಾ ವಿಧಾನವಾಗಿದೆ ಹಾಗೂ ವಿದ್ಯಾರ್ಥಿ ಕೇಂದ್ರೀಕೃತವಾಗಿದೆ. ವಿದ್ಯಾರ್ಥಿಗಳು ಇದನ್ನು ಅಳವಡಿಸಿಕೊಂಡು ಕಲಿಕಾ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು’ ಎಂದು ಹೇಳಿದರು.
ಡಾ.ರಾಜಕುಮಾರ ರಾಯ್ಕರ ಸ್ವಾಗತಿಸಿದರು. ಡಾ.ಉಮೇಶ ದೇಶನ್ನವರ ಪರಿಚಯಿಸಿದರು. ಡಾ.ಮಹೇಶ ಕಾಮೋಜಿ ವಂದಿಸಿದರು.