‘ಪಿಓಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಿ’

ಬೆಳಗಾವಿ: ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿರುವ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ಶಹಾಪುರದ ಮಧ್ಯವರ್ತಿ ಗಣೇಶೋತ್ಸವ ಮಹಾಮಂಡಳದ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ನೇತಾಜಿ ಜಾಧವ ಮಾತನಾಡಿ, ‘ಜಿಲ್ಲಾಡಳಿತ ಕೆಲ ದಿನಗಳ ಹಿಂದೆ ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸದಂತೆ ಎಚ್ಚರಿಕೆ ನೀಡುತ್ತಿದೆ. ತಯಾರಕರು ಈಗಾಗಲೇ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ನಿಷೇಧಿಸುವುದಾದರೇ ಮೂರ್ನಾಲ್ಕು ತಿಂಗಳ ಹಿಂದೆಯೇ ಈ ಬಗ್ಗೆ ತಿಳಿಹೇಳಬೇಕಾಗಿತ್ತು. ಬಹುತೇಕ ತಯಾರಿಕರು ಲಕ್ಷಾಂತರ ರೂಪಾಯಿ ವೆಚ್ಚದ ಮೂರ್ತಿಗಳನ್ನು ಈಗಾಗಲೇ ತಯಾರಿಸಿದ್ದು, ಬಣ್ಣ ಮಾಡುವುದು ಮಾತ್ರ ಬಾಕಿ ಇದೆ. ಮೂರ್ತಿಗಳನ್ನು ನಿಷೇಧ ಮಾಡುವುದರಿಂದ ತಯಾರಕರಿಗೆ ನಷ್ಟ ಉಂಟಾಗುತ್ತದೆ’ ಎಂದು ಅಳಲು ತೋಡಿಕೊಂಡರು.
‘ನಗರದಲ್ಲಿ ಗಣೇಶ ವಿಸರ್ಜನೆಗೆ ಪ್ರತ್ಯೇಕ ಹೊಂಡ ಹಾಗೂ ಬಾವಿಗಳ ವ್ಯವಸ್ಥೆ ಮಾಡಲಾಗಿರುವುದರಿಂದ ಜಲಮಾಲಿನ್ಯ ಉಂಟಾಗುವ ಸಾಧ್ಯತೆಯೂ ಇಲ್ಲ. ಹೀಗಾಗಿ, ಪಿಓಪಿ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾರ್ಯಾಧ್ಯಕ್ಷ ರಮೇಶ ಸೊಂಟಕ್ಕಿ, ಉಪಾಧ್ಯಕ್ಷ ಅಶೋಕ ಚಿಂಡಕ, ದೀಪಕ ಜಮಖಂಡಿ, ಸತೀಶ ಪಾಟೀಲ, ರಾಜು ಸುತಾರ ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.