ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ, ಎಲೆಕ್ಟ್ರಾನಿಕ್ ಉಪಕರಣ ಬಳಸಿ ಅಕ್ರಮ ಎಸಗಿದ್ದ ಆರೋಪದಡಿ ಮತ್ತೆ ಮೂವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಗೋಕಾಕ ತಾಲ್ಲೂಕು ಅರಭಾವಿಯ ಅಕ್ಷಯ್ ದುಂದಪ್ಪ ಭಂಡಾರಿ (33), ಬೀರಣಗಡ್ಡಿಯ ಬಸವರಾಜ ರುದ್ರಪ್ಪ ದುಂದನಟ್ಟಿ (34) ಹಾಗೂ ರಾಜಾಪುರದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ (22) ಬಂಧಿತರು. ಇವರೊಂದಿಗೆ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಇವರ ಪಾತ್ರವೇನು?:
ಬೆಂಗಳೂರಿನ ದೇವಸಂದ್ರದಲ್ಲಿ ಈಚೆಗೆ ಬಂಧಿಸಲಾದ ಎಲೆಕ್ಟ್ರಾನಿಕ್ ಉಪಕರಣ ಹಾಗೂ ಸ್ಮಾರ್ಟ್ ವಾಚ್ ಮಾರಾಟ ಮಾಡುತ್ತಿದ್ದ ಮಹಮ್ಮದ್ ಅಜೀಮುದ್ದೀನ್ ಹಾಗೂ ಅಕ್ಷಯ್ ಮಧ್ಯೆ ಸಂಪರ್ಕವಿತ್ತು. ಅಕ್ಷಯ್ ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಪರಿಕರಗಳನ್ನು ತಂದು ಮುಖ್ಯ ಆರೋಪಿ ಸಂಜು ಭಂಡಾರಿಗೆ ಕೊಟ್ಟಿದ್ದ. ಈ ಉಪಕರಣಗಳ ಮಾರ್ಪಾಡಿಗೆ ನೆರವಾಗಿದ್ದ. ಆರೋಪಿಯಿಂದ ಒಂದು ಮೊಬೈಲ್ ಫೋನ್, 50 ಖಾಲಿ ಎಲೆಕ್ಟ್ರಾನಿಕ್ ಉಪಕರಣಗಳು, 18 ಮಾರ್ಪಾಡು ಮಾಡಿದ್ದ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿ ಬಸವರಾಜ ದುಂದನಟ್ಟಿಯು ಹುಕ್ಕೇರಿ ತಾಲ್ಲೂಕಿನ ಶಿರಹಟ್ಟಿಯ ತೋಟದ ಮನೆಯಲ್ಲಿ ಕುಳಿತು ಉತ್ತರಗಳನ್ನು ಡಿವೈಸ್ ಬಳಸಿಕೊಂಡು ಅಭ್ಯರ್ಥಿಗಳಿಗೆ ಹೇಳಿದ್ದ. ಶ್ರೀಧರ್ ಎಂಬ ಆರೋಪಿ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಉಪಕರಣ ಮುಟ್ಟಿಸಿದ್ದ.
ಮಾಸ್ಟರ್ ಕಾರ್ಡ್ನಂತೆ ಮಾರ್ಪಾಡು:
ಆರೋಪಿಗಳ ಬಳಿ ಸಿಕ್ಕಿರುವ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ನೋಡಿದ ತಕ್ಷಣ ಅವು ಬ್ಯಾಂಕಿನ ಮಾಸ್ಟರ್ ಕಾರ್ಡ್, ಡೆಬಿಟ್ ಕಾರ್ಡ್ನಂತೆಯೇ ಕಾಣಿಸುತ್ತವೆ. ಪ್ರತಿಯೊಂದಕ್ಕೂ ಒಂದೊಂದು ಸಿಮ್ ಇದ್ದು, ಮೊಬೈಲ್ನಂತೆ ಕೆಲಸ ಮಾಡಬಲ್ಲವು. ಪ್ರತಿಯೊಂದಕ್ಕೂ ಒಂದೊಂದು ಪ್ರತ್ಯೇಕ ‘ಹೀಯರಿಂಗ್ ಪೀಸ್’ ಇದ್ದು ಅದನ್ನು ಕಿವಿಯೊಳಗೆ ಇಟ್ಟುಕೊಂಡರೆ ಸಾಕು; ದೂರದಿಂದ ಉತ್ತರ ರವಾನಿಸಲು ಸುಲಭವಾಗುತ್ತದೆ. ಆರೋಪಿಗಳು ಚಾಣಾಕ್ಷತೆಯಿಂದ ಇವುಗಳನ್ನು ಪರಿಷ್ಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.