ಅಥಣಿ: ‘ಸಾಹಿತ್ಯ ಅಕಾಡೆಮಿ ಹಾಗೂ ಜೆ.ಇ.ಶಿಕ್ಷಣ ಸಂಸ್ಥೆಯ ಕೆ.ಎ.ಲೋಕಾಪೂರ ಪದವಿ ಕಾಲೇಜಿನ ವತಿಯಿಂದ ‘ಕನ್ನಡ ಸಣ್ಣ ಕಥೆಗಳ ಉಗಮ ಮತ್ತು ಬೆಳವಣಿಗೆ’ ವಿಷಯದ ಕುರಿತ ವಿಚಾರ ಸಂಕಿರಣವನ್ನು ಡಿ.24ರಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಆರ್.ಎಚ್. ಕುಲಕರ್ಣಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕೆ.ಎ.ಲೋಕಾಪೂರ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರವಿಂದ ದೇಶಪಾಂಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸುವರು. ಕಸಾಪ ಅಧ್ಯಕ್ಷ ಮನು ಬಳಿಗಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪೂರ, ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ, ಕಥೆಗಾರ ಅಮರೇಶ ನುಗಡೋಣಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು’ ಎಂದರು.
‘ಮಧ್ಯಾಹ್ನ 12ಕ್ಕೆ ಮೊದಲ ಗೋಷ್ಠಿಯಲ್ಲಿ ಚನ್ನಪ್ಪ ಕಟ್ಟಿ ಅವರು ‘ನೈತಿಕವಾದಿ ನೆಲೆಯ ಕಥೆಗಳು’ (ನವೋದಯ), ವೆಂಕಟಗಿರಿ ದಳವಾಯಿ ಅವರು ‘ಅಸ್ತಿತ್ವವಾದಿ ನೆಲೆಯ ಕಥೆಗಳು’ (ನವ್ಯ) ಕುರಿತು ವಿಷಯ ಮಂಡಿಸುವರು. ದೀಪ್ತಿ ಭದ್ರಾವತಿ ಕಥಾವಾಚನ ಮಾಡಲಿದ್ದಾರೆ. ಮಧ್ಯಾಹ್ನ 2ಕ್ಕೆ ಎರಡನೇ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭವಿದೆ. ಬಾಳಾಸಾಹೇಬ ಲೋಕಾಪೂರ ಭಾಷಣ ಮಾಡುವರು. ಪ್ರಾಚಾರ್ಯ ಆರ್.ಎಂ. ದೇವರಡ್ಡಿ, ಕಾರ್ಯಾಧ್ಯಕ್ಷ ರಾಮ ಕುಲಕರ್ಣಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಕಾಲೇಜಿನ ರಾಮ ಕುಲಕರ್ಣಿ, ಬಾಳಾಸಾಹೇಬ ಲೋಕಾಪೂರ, ಎಸ್.ವಿ. ಜೋಶಿ, ಎಲ್.ವಿ. ಕುಲಕರ್ಣಿ, ಆನಂದ ದೇಶಪಾಂಡೆ, ಆರ್.ಎಂ. ದೇವರಡ್ಡಿ, ಪಿ.ಎಂ. ಹುಲಗಬಾಳಿ, ವಿ.ಪಿ. ಜಾಲಿಹಾಳ ಇದ್ದರು.