ಹುಕ್ಕೇರಿ: ಸ್ಥಳೀಯ ವಕೀಲರ ಸಂಘಕ್ಕೆ ಗುರುವಾರ ಜರುಗಿದ ತುರುಸಿನ ಸ್ಪರ್ಧೆಯಲ್ಲಿ ಎರಡು ಬಣಗಳ ಸಮಬಲದ ಹೋರಾಟದ ಫಲಿತಾಂಶ ತಡರಾತ್ರಿ ಹೊರಬಿತ್ತು.
ಅಧ್ಯಕ್ಷರ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನ್ನೀಸ್ ವಂಟಮೂರಿ ಮತ್ತು ಕಾಡಪ್ಪ ಕುಡಬೇಟ ಸಮಬಲದ ಹೋರಾಟ ನಡೆಸಿದರು.
ನಂತರ ಒಮ್ಮತಕ್ಕೆ ಬಂದ ಇಬ್ಬರೂ, ಎರಡು ವರ್ಷದ ಅವಧಿಯಲ್ಲಿ ಮೊದಲ ಅವಧಿಗೆ ಅನ್ನೀಸ್ ವಂಟಮೂರಿ, ನಂತರದ ಅವಧಿಗೆ ಕಾಡಪ್ಪ ಕುರಬೇಟ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ನಿರ್ಧಿರಿಸಿದರು.
ಪದಾಧಿಕಾರಿಗಳು: ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಜಿನರಾಳಿ, ಕಾರ್ಯದರ್ಶಿಯಾಗಿ ಶೌಕತ್ ಅಲಿ ನದಾಫ್, ಸಹ ಕಾರ್ಯದರ್ಶಿಯಾಗಿ ವಿಠ್ಠಲ್ ಘಸ್ತಿ, ಖಜಾಂಚಿಯಾಗಿ ಅಂಬರೀಶ್ ಬಾಗೇವಾಡಿ ಮತ್ತು ಮಹಿಳಾ ಪ್ರತಿನಿಧಿಯಾಗಿ ಅನಿತಾ ಕುಲಕರ್ಣಿ ಆಯ್ಕೆಯಾದರು.
ಹಿರಿಯ ವಕೀಲ ಅಶೋಕ ಹುಲ್ಲೋಳಿ ಚುನಾವಣಾಧಿಕಾರಿಯಾಗಿ ಮತ್ತು ಪಿ.ಎಸ್.ಪಾಟೀಲ ಎಆರ್ಒ ಆಗಿ ಕಾರ್ಯನಿರ್ವಹಿಸಿದರು.
200 ಸದಸ್ಯರ ಪೈಕಿ 192 ಸದಸ್ಯರು ಮತ ಚಲಾಯಿಸಿದರು. ಅದರಲ್ಲಿ ಒಂದು ಮತ ಅಮಾನ್ಯವಾಗಿತ್ತು.
ಅನ್ನೀಸ್ ವಂಟಮೂರಿ ಮಾತನಾಡಿ, ‘ಕ್ಯಾರಗುಡ್ಡ ಬಳಿ ಮಂಜೂರಾದ 5 ಎಕರೆ ಜಮೀನಿನಲ್ಲಿ ನೂತನ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ, ನೂತನ ವಕೀಲರಿಗೆ ವ್ಯಕ್ತಿತ್ವ ವಿಕಸನ, ನೈಪುಣ್ಯತೆ ಹೆಚ್ಚಿಸುವ ಕಾರ್ಯಾಗಾರ ಮತ್ತು ಗ್ರಂಥಾಲಯ ಸುಧಾರಣೆಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
ವಕೀಲರಾದ ಕೆ.ಎಲ್.ಜಿನರಾಳಿ, ಡಿ.ಕೆ.ಅವರಗೋಳ, ಬಿ.ಕೆ.ಮಗೆನ್ನವರ, ನಿರ್ಗಮಿತ ಅಧ್ಯಕ್ಷ ರಾಜು ಚೌಗಲಾ ಇದ್ದರು.
ವಿಜಯೋತ್ಸವ: ಫಲಿತಾಂಶ ಘೋಷಣೆಯಾದ ಬಳಿಕ ವಿಜೇತ ವಕೀಲರ ಬೆಂಬಲಿಗರು ಕೋರ್ಟ್ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹುಕ್ಕೇರಿ ವಕೀಲರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು ವಿಜಯದ ಸಂಕೇತ ತೋರಿದರು