ಬೆಳಗಾವಿ: ‘ವಿಶ್ವಗುರು ಬಸವಣ್ಣ ಮಾನವೀಯತೆ, ಸಮಾನತೆಯ ಹರಿಕಾರ. ಅವರ ಸಂದೇಶ ಇಂದಿಗೂ ಲೋಕಮಾನ್ಯ ಎನಿಸಿದೆ’ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭೆ ಜಿಲ್ಲಾ ಘಟಕ, ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಬೃಹತ್ ಬೈಕ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ರಸ್ತುತ ಯುದ್ಧ ಹಾಗೂ ಜಾತಿಗಳ ಸಂಘರ್ಷದಲ್ಲಿ ಬದುಕುತ್ತಿರುವ ನಮಗೆ ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆನಿಸಿದೆ’ ಎಂದರು.
‘ನಾವೆಲ್ಲ ಒಳಪಂಗಡಗಳನ್ನು ಮಾಡಿಕೊಂಡು ಹೋರಾಡುತ್ತಿದ್ದೇವೆ. ಅದನ್ನು ಬದಿಗಿಟ್ಟು ಸಾಂಘಿಕವಾಗಿ ಸಮಾಜವನ್ನು ಕಟ್ಟಬೇಕಾಗಿದೆ. ಅಣ್ಣನವರು 12ನೇ ಶತಮಾನದಲ್ಲಿಯೇ ಸಮಾಜದ ಪ್ರಗತಿಗಾಗಿ ಹೋರಾಡಿದರು. ಇಂದು ದೇಶ– ವಿದೇಶಗಳಲ್ಲಿ ಬಸವಣ್ಣನವರ ವಚನಗಳ ಅಧ್ಯಯನ ನಡೆಯುತ್ತಿದೆ. ಅವರು ಕನ್ನಡ ನಾಡಿನಲ್ಲಿ ಅವತರಿಸಿರುವುದು ನಮ್ಮ ಸೌಭಾಗ್ಯ. ನಾಡಿನುದ್ದಗಲಕ್ಕೂ ನಮ್ಮ ಯುವಜನರು ಅವರ ಸಂದೇಶಗಳನ್ನು ಅರಿಯಬೇಕು. ಬಸವ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡುತ್ತ, ‘ಬಸವಣ್ಣನವರ ಮಾನವೀಯತೆ ವಿಚಾರಗಳನ್ನು ಅಳವಡಿಸಿಕೊಳ್ಳುವ ಕೆಲಸ ಮೊದಲು ನಡೆಯಬೇಕಾಗಿದೆ. ನೈತಿಕ ಬದುಕು ನಮ್ಮದಾದರೆ ಸಮಾಜ ಸುಧಾರಣೆ ಸಾಧ್ಯ. ನಡೆ–ನುಡಿ ಒಂದಾಗಿ ಜೀವನವನ್ನು ರೂಪಿಸಿಕೊಳ್ಳುವ ಮಹತ್ತರ ಕಾರ್ಯ ಎಲ್ಲರಿಂದ ನಡೆಯಬೇಕಾಗಿದೆ’ ಎಂದು ತಿಳಿಸಿದರು.
ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ವಕೀಲ ಎಂ.ಬಿ.ಜೀರಲಿ, ಡಾ.ಎಚ್.ಬಿ.ರಾಜಶೇಖರ, ಡಾ.ಎಸ್.ಎಂ.ದೊಡ್ಡಮನಿ, ರಾಜು ಹತ್ತರಕಿ, ಉತ್ಸವ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ ನಿಂ. ಪಾಟೀಲ. ಉಪಾಧ್ಯಕ್ಷ ಸುಜೀತ ಮುಳಗುಂದ, ಪ್ರಸಾದ ಹಿರೇಮಠ, ರಾಜು ಟೋಪಣ್ಣನವರ, ಬಾಲಚಂದ್ರ ಬಾಗಿ, ವೀಣಾ ನಾಗಮೋತಿ, ರಕ್ಷಾ ದೇಗಿನಾಳ, ವೀರೇಶ ಅಪ್ಪಯ್ಯನವರಮಠ ಮೊದಲಾದವರು ಇದ್ದರು.
ಬೈಕ್ ರ್ಯಾಲಿ ಯಶಸ್ವಿ ಹಲವು ಯುವಜನರು ಮಹಿಳೆಯರು ಪುರುಷರು ಸೇರಿಕೊಂಡು ಬಸವಣ್ಣನವರ ಪ್ರತಿಮೆ ಹಾಗೂ ಬಾವುಟವನ್ನು ಹಿಡಿದುಕೊಂಡು ಬೈಕ್ ರ್ಯಾಲಿ ಯಶಸ್ವಿಗೊಳಿಸಿದರು. ರ್ಯಾಲಿಯು ಲಿಂಗಾಯತ ಭವನ ಶಿವಬಸವನಗರ ಮಾರ್ಗದಿಂದ ಪ್ರಾರಂಭವಾಗಿ ನಾಗನೂರ ರುದ್ರಾಕ್ಷಿ ಮಠ ರಾಮದೇವ ಹೊಟೇಲ್ ಚನ್ನಮ್ಮ ವೃತ್ತ ಗಣಪತಿ ಗಲ್ಲಿ ಮಾರುತಿ ಗಲ್ಲಿ ಬೋಗಾರ್ವೇಸ್ ಟಿಳಕ ಚೌಕ ಕಪಿಲೇಶ್ವರ ಮೇಲ್ಸೇತುವೆ ಶಿವಾಜಿ ಉದ್ಯಾನ ಶಹಾಪೂರ ಮೂಲಕ ಬಸವೇಶ್ವರ ಸರ್ಕಲ್ (ಖಾಸಬಾಗ) ನಾಥಪೈ ಸರ್ಕಲ್ ಕೆಎಲ್ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜ್ ಮಾರ್ಗವಾಗಿ ಬಸವವೃತ್ತ (ಗೋವಾ ವೇಸ್)ವರೆಗೆ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.