ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿಗರು–ಎಂಇಎಸ್ ಒಳಜಗಳದಿಂದ ಬಿಜೆಪಿಗೆ ಲಾಭ: ಸತೀಶ ಜಾರಕಿಹೊಳಿ ಹೇಳಿಕೆ

Last Updated 8 ಸೆಪ್ಟೆಂಬರ್ 2021, 11:15 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ನಿರೀಕ್ಷೆಯಷ್ಟು ಗೆಲುವು ಸಾಧಿಸಿದ್ದಾರೆ. ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಹಾಗೂ ಮರಾಠಿಗರ ಒಳಜಗಳದಿಂದ ಬಿಜೆಪಿಗೆ ಲಾಭವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ಲೇಷಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಮೋಡಿಯಿಂದ ಬಿಜೆಪಿಯವರು ಇಲ್ಲಿ ಗೆದ್ದಿಲ್ಲ. ಚುನಾವಣೆ ಫಲಿತಾಂಶದ ಬಗ್ಗೆ ಆಶ್ಚರ್ಯ ಪಡೆಬೇಕಿಲ್ಲ. ಕಾಂಗ್ರೆಸ್‌ನಲ್ಲಿರುವ ಹೊಂದಾಣಿಕೆ ಕೊರತೆಯಿಂದ ಬಿಜೆಪಿ ಸ್ಥಾನ ಪಡೆದುಕೊಂಡಿದೆ’ ಎಂದು ಹೇಳಿದರು.

‘ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಿ ಗೆದ್ದಂತೆ ಬೊಬ್ಬೆ ಹೊಡೆಯುತ್ತಿದ್ದಾರೆ. ಲೆಕ್ಕಾಚಾರದ ಕ್ಷೇತ್ರಗಳು ಕೈ ವಶವಾಗಿವೆ. ಇನ್ನೂ 8 ಸೀಟುಗಳು ಬರಬೇಕಿತ್ತು. ಆದರೆ, ಸ್ವಲ್ಪ ಹಿನ್ನಡೆಯಾಗಿದೆ. ಕಾಂಗ್ರೆಸ್ ವೈಫಲ್ಯಗಳಿಲ್ಲ; ನಮ್ಮ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಗೆಲ್ಲುವ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ’ ಎಂದರು.

‘ಬಿಜೆಪಿಯವರು ಮರಾಠಿಗರನ್ನು ಬಳಸಿಕೊಂಡಿದ್ದಾರೆ. ಅವರಿಂದ ಬಿಜೆಪಿ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಿದೆ. ನಮ್ಮ ಗೆಲುವು ನಮಗೆ ತೃಪ್ತಿ ತಂದಿದೆ. 15 ಸ್ಥಾನಗಳಲ್ಲಿ ಗೆಲುವು ಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಹೇಳಿದ್ದೆವು. ಆ ಸಂಖ್ಯೆಯ ಸಮೀಪಕ್ಕೆ ಬಂದಿದ್ದೇವೆ. ಪಕ್ಷೇತರರಲ್ಲಿ ಗೆದ್ದ ಐವರು ಸದಸ್ಯರು ನಮ್ಮೊಂದಿಗೆ ಇದ್ದಾರೆ. ದಕ್ಷಿಣದಲ್ಲಿ ಮೂರು ಮತ್ತು ಉತ್ತರದಲ್ಲಿ 5 ಸ್ಥಾನ ನೇರವಾಗಿ ಕಳೆದುಕೊಂಡಿದ್ದೇವೆ’ ಎಂದು ಹೇಳಿದರು.

‘ಗೆಲುವು ನಿರೀಕ್ಷಿಸಿದ್ದ ವಾರ್ಡ್‌ಗಳಲ್ಲಿ ಸೋಲಿಗೆ ಕಾರಣ ತಿಳಿದು, ಅದನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

‘ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ನಗರದಲ್ಲಿ ನಮಗೆ ಬಂದಿದ್ದಷ್ಟೆ ಮತಗಳು ಈಗಲೂ ಬಂದಿವೆ. ಇದರಲ್ಲೇನೂ ವ್ಯತ್ಯಾಸವಾಗಿಲ್ಲ. ಆದರೆ, ಬಿಜೆಪಿಯ ಜಯ ಕಾಂಗ್ರೆಸ್‍ನ ವೈಫಲ್ಯ ಎಂದಾಗಬಾರದು. ಒಂದೇ ವಾರ್ಡ್‍ನಲ್ಲಿ ಎಂಇಎಸ್‍ನಿಂದ ಮೂರ್ನಾಲ್ಕು ಅಭ್ಯರ್ಥಿಗಳು ಕಣಕ್ಕಿಳಿದರು. ಈ ಗೊಂದಲದಿಂದ ಬಿಜೆಪಿಗೆ ಅನಿರೀಕ್ಷಿತ ಲಾಭವಾಯಿತು. ಇದನ್ನೇ ಅವರು ತಮ್ಮ ಶಕ್ತಿ ಎನ್ನುತ್ತಿದ್ದಾರೆ. ಇದರಲ್ಲಿ ಬಿಜೆಪಿ ಶಕ್ತಿ ಏನಿಲ್ಲ’ ಎಂದು ತಿಳಿಸಿದರು.

‘ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಸಿಗದಿರುವುದಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಹೊಣೆ ಮಾಡಲಾಗದು. ಕೆಲವು ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಲೆ ಸೃಷ್ಟಿಯಾಗಿದೆ. ಇದನ್ನೇ ಅಡಿಪಾಯ ಆ‌‌ಗಿಟ್ಟುಕೊಂಡು ಇಡೀ ನಗರದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುತ್ತೇವೆ. ಏನೇ ಲೋಪ-ದೋಷಗಳಿದ್ದರೂ ತಿದ್ದಿಕೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಇಲ್ಲಿ ಪಕ್ಷದ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಇದ್ದಿದ್ದು ನಿಜ’ ಎಂದರು. ಯಾವ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಇತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT