ಬೆಳಗಾವಿ: ‘ವೇತನಕ್ಕೆ ಕೊರತೆಯಾಗುವ ₹ 382 ಕೋಟಿ ಬಿಡುಗಡೆ ಮಾಡಬೇಕು. ಬಾಕಿ ಇರುವ ಅನುಮೋದನೆ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಬೇಕು. ಇಎಫ್ಎಂಎಸ್ ಪಂಚತಂತ್ರದಲ್ಲಿ ಬಾಕಿ ಉಳಿದಿರುವ ಸಿಬ್ಬಂದಿಯನ್ನು ಸೇರಿಸಿ ಬಾಕಿ ವೇತನ ನೀಡಬೇಕು’ ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿಯವರು ಇಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ಸರ್ಕಾರ ಈ ಹಿಂದೆ (2012ರಲ್ಲಿ) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಪ್ರತ್ಯೇಕ ನೀರಿನ ಸ್ಥಾವರಗಳನ್ನು ನಿರ್ಮಿಸಬೇಕು. ಅದಕ್ಕೆ ತಕ್ಕಂತೆ ಸಿಬ್ಬಂದಿ ನೇಮಿಸಿಕೊಳ್ಳಬೇಕು ಎಂದು ಕೆಲಸದ ಹಂಚಿಕೆ ಮಾಡಿ ಆದೇಶ ಹೊರಡಿಸಿತ್ತು. ಇದರ ಅನ್ವಯ 34,587 ವಾಟರ್ಮನ್ಗಳು 60ಸಾವಿರ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಸರ್ಕಾರವು ಈಚೆಗೆ ಈ ನೌಕರರ ಕೆಲಸ ಪುನರ್ ವಿಮರ್ಶೆಗೆ ಸಮಿತಿ ರಚಿಸಿದೆ. ಇದು ನೌಕರರ ವಿರೋಧಿ ಧೋರಣೆಯಾಗಿದ್ದು, ಕೂಡಲೇ ಸಮಿತಿ ರದ್ದುಪಡಿಸಬೇಕು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ವಿ.ಪಿ. ಕುಲಕರ್ಣಿ ಒತ್ತಾಯಿಸಿದರು.
‘ಗ್ರಾಮ ಪಂಚಾಯಿತಿ ನೌಕರರಿಗೆ ಇಎಫ್ಎಂಎಸ್ ಮೂಲಕ ಸರ್ಕಾರದ ನಿಧಿಯಿಂದ ವೇತನ ನೀಡುವುದಾಗಿ2018ರ ಮಾರ್ಚ್ನಲ್ಲಿ ಆದೇಶ ಹೊರಡಿಸಲಾಗಿತ್ತು. ಆದರೆ, 2 ವರ್ಷವಾದರೂ ಇಎಫ್ಎಂಎಸ್ ಮೂಲಕ ವೇತನ ಸಿಗದೆ ನೌಕರರು ಪರದಾಡುತ್ತಿದ್ದಾರೆ’ ಎಂದು ತಿಳಿಸಿದರು.
‘ಸರ್ಕಾರದ ಆದೇಶದಂತೆ ಕನಿಷ್ಠ ವೇತನ ನೀಡಬೇಕು ಹಾಗೂ ರಜೆ ಕೊಡಬೇಕು ಎನ್ನುವ ಆದೇಶಗಳು ಪಂಚಾಯಿತಿಗಳ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ’ ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ಎಂ. ಜೈನೆಖಾನ ವಿಷಾದ ವ್ಯಕ್ತಪಡಿಸಿದರು. ‘ಆದೇಶಗಳನ್ನು ಕೆಳಮಟ್ಟದಲ್ಲಿ ಜಾರಿಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಸಂಘದ ಎಲ್.ಎಸ್. ನಾಯಕ, ವೀರಭದ್ರ ಕಂಪ್ಲಿ, ದುಂಡಪ್ಪ ಭಜನಾಯಕ, ಪ್ರಕಾಶ ಬಸ್ಸಾಪೂರ, ಕಲ್ಲಪ್ಪ ಮಾದರ, ಯಲ್ಲಪ್ಪ ನಾಯಕ, ಪುಂಡಲೀಕ ಕುರಬೇಟ, ವಿಠೋಬಾ ಬುತ್ತೇವಾಡಕರ, ಜಯಾನಂದ ಪಾಟೀಲ ಇದ್ದಾರೆ.