ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷಣವೊಂದರ ಅನುಭವದ ಆತ್ಮಾಭಿವ್ಯಕ್ತಿಯೇ ಕಾವ್ಯ

ಸಾಹಿತಿ ಆಶಾ ಕಡಪಟ್ಟಿ ಅವರ ಮೂರು ಕೃತಿಗಳ ಲೋಕಾರ್ಪಣೆ ಮಾಡಿದ ವಿದ್ವಾಂಸ ಸಿ.ಕೆ.ನಾವಲಗಿ
Published 27 ಡಿಸೆಂಬರ್ 2023, 7:43 IST
Last Updated 27 ಡಿಸೆಂಬರ್ 2023, 7:43 IST
ಅಕ್ಷರ ಗಾತ್ರ

ಬೆಳಗಾವಿ: ‘ನಮಗರಿವಿಲ್ಲದೆಯೇ ನಾವು ನೋವನ್ನು, ದುಃಖವನ್ನು ಅನುಭವಿಸುತ್ತೇವೆ. ಆ ಅನುಭವಗಳೇ ಅನುಭೂತಿಯಾಗುತ್ತದೆ. ಕ್ಷಣವೊಂದರ ಅನುಭವದ ಆತ್ಮಾಭಿವ್ಯಕ್ತಿಯೇ ಕಾವ್ಯವಾಗುತ್ತದೆ. ಕಾವ್ಯಕ್ಕೆ ನೋವು, ದುಃಖ, ವಿರಹವೇ ಮುಖ್ಯ ಪರಿಣಾಮಕಾರಕ’ ಎಂದು ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಅಭಿಪ್ರಾಯ ಪಟ್ಟರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸಾಹಿತ್ಯ ಸಂವಾದ ಹಾಗೂ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಸಾಹಿತಿ ಆಶಾ ಕಡಪಟ್ಟಿ ಅವರ ಮೂರು ಕೃತಿಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಆಶಾ ಕಡಪಟ್ಟಿ ಅವರ ‘ಅವ್ವ ನಿನ್ನಾರ ಹೋಲರ’ ತ್ರಿಪದಿ ಕವನ ಸಂಕಲವನ್ನು ಪರಿಚಯಿಸಿದ ಅವರು, ‘ತಾಯಿಯನ್ನು, ಪತಿಯನ್ನು ಕಳೆದುಕೊಂಡ ದುಃಖತಪ್ತ ಕವಯತ್ರಿ ತನ್ನ ವೇದನೆಯ ಅಳಲನ್ನು ಮಮ್ಮಲ ಮರಗುವಂತೆ ತೋಡಿಕೊಂಡಿದ್ದಾಳೆ. ಇದು ಅತ್ಮಗತ ಕಾವ್ಯವೆನಿಸಿದರೂ ಎಲ್ಲ ತಾಯಿ– ಮಗಳಿಗೂ ಅನ್ವಯಿಸುವಂಥದ್ದು. ಹಾಗಾಗಿ ಇದೊಂದು ಜನಪದ ತ್ರಿಪದಿ ಸಾಹಿತ್ಯಕ್ಕೆ ನಿಷ್ಠೆಯಿಂದ ಕೊಟ್ಟ ವಿಶಿಷ್ಠ ಕೊಡುಗೆ’ ಎಂದು ನಾವಲಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಸರಜೂ ಕಾಟ್ಕರ್ ಮಾತನಾಡಿ, ‘ಸಾಕಷ್ಟು ಮಹಿಳೆಯರನ್ನು ಸಾಹಿತ್ಯ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿ ಬೆಳೆಸಿರುವ ಕೀರ್ತಿ ಆಶಾ ಕಡಪಟ್ಟಿ ಅವರಿಗೆ ಸಲ್ಲುತ್ತದೆ. ಒಂದು ಕಾಲಕ್ಕೆ ಬೆಳಗಾವಿ ಲೇಖಕಿಯರ ಸಂಘದಲ್ಲಿ ಕೇವಲ ನಾಲ್ಕು ಸದಸ್ಯರು ಇದ್ದರು. ಇವತ್ತು ಅದು ತುಂಬು ಕುಟುಂಬವಾಗಿದೆ. ಬರೆಯಲು ಪ್ರೋತ್ಸಾಹಿಸಿ ಸಾಕಷ್ಟು ಬೆಂಬಲ ನೀಡುತ್ತಾರೆ’ ಎಂದರು.

ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ವಿಜಯಲಕ್ಷ್ಮಿ ಪುಟ್ಟಿ ಮಾತನಾಡಿ, ‘ಆಶಾ ಕಡಪಟ್ಟಿ ಅವರು ಒಬ್ಬ ಸೃಜನಶೀಲ ಹೃದಯವಂತ ಕವಯತ್ರಿ. ತಾವು ಬೆಳೆದು ಜತೆಗೆ ಇರುವವರನ್ನು ಬೆಳೆಸುವ ಮನೋಭಾವ ಹೊಂದಿದವರು’ ಎಂದರು.

ಸಾಹಿತಿ ಗುರುದೇವಿ ಹುಲೆಪ್ಪನವರಮಠ ‘ಹರಕು ಕೌದಿಯ ಕಿಂಡಿ’ ಪುಸ್ತಕ ಅವಲೋಕಿಸುತ್ತ, ‘ಜೀವನದಲ್ಲಿ ಏನೇ ಬಂದರೂ ನಗುತ ಬದುಕುವ ಕಲೆ ಕಂಡುಕೊಂಡವರು ಆಶಾ’ ಎಂದರು.

‘ಹಾದಿಗಳ ಹುಡುಕುತ್ತಾ’ ಎಂಬ ಕಥಾಸಂಕಲನ ಪರಿಚಯಿಸಿದ ಸುನಂದ ಎಮ್ಮಿ, ‘ಆಶಾ ಅವರು ನಮ್ಮೆಲ್ಲರಿಗೂ ಸಲಹೆ ಸೂಚನೆಗಳನ್ನು ನೀಡುತ್ತ ಹುರಿದುಂಬಿಸುತ್ತಿರುವ ಸಹೃದಯರು. ಅವರ ಕಥೆಗಳು ಓದುಗರ ಹಿಡಿದಿಡುವಲ್ಲಿ ಸಫಲವಾಗಿವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಸ್ವಾಗತಿಸಿದರು. ಹೀರಾ ಚೌಗಲೆ ಪ್ರಾರ್ಥಿಸಿದರು. ಕೀರ್ತಿ ಮತ್ತು ಕವಿತಾ ನಾಡಗೀತೆ ಹಾಡಿದರು. ಸುನಂದಾ ಎಮ್ಮಿ, ಅನ್ನಪೂರ್ಣ ಹಿರೇಮಠ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT