ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಸತಿ ಫಲಾನುಭವಿಗಳ ಆಯ್ಕೆ ಸ್ಪಷ್ಟವಾಗಿರಲಿ

ತಾಲ್ಲೂಕು ಪಂಚಾಯಿತಿ , ಗ್ರಾಮ ಪಂಚಾಯಿತಿಗಳಿಗೆ ಸಿಇಒ ರಾಹುಲ್‌ ಶಿಂಧೆ ಎಚ್ಚರಿಕೆ
Published 11 ಜೂನ್ 2024, 6:36 IST
Last Updated 11 ಜೂನ್ 2024, 6:36 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಳಗಾವಿ: ‘ವಸತಿ ಯೋಜನೆಯ ಫಲಾನುಭವಿ ಆಯ್ಕೆ ವಿಧಾನ ಸರಿಯಾದ ರೀತಿಯಲ್ಲಿ ಆಗಬೇಕು. ಮನೆಯ ಜಿ.ಪಿ.ಎಸ್ ಮಾಡುವ ಸಂದರ್ಭದಲ್ಲಿ ದುಡ್ಡು ಕೇಳುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅಂತಹ ದೂರುಗಳು ಜಿಲ್ಲಾ ಪಂಚಾಯಿತಿವರೆಗೆ ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಎಚ್ಚರಿಸಿದರು.

ಸುವರ್ಣಸೌಧದ ಸೆಂಟ್ರಲ್ ಹಾಲ್‌ನಲ್ಲಿ ಈಚೆಗೆ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎಲ್ಲ ಗ್ರಾಮ ಪಂಚಾಯಿತಿಗಳು ತಮ್ಮ ಹಂತದಲ್ಲಿ ವಸತಿ ರಹಿತ ಜನರ ಹೆಸರುಗಳ ಪಟ್ಟಿ ಸಿದ್ಧಪಡಿಸಬೇಕು. ಸರ್ಕಾರಿ ಜಮೀನು ಸರ್ವೆ ನಂಬರ್‌ ಮತ್ತು ಉತಾರ ಸಹಿತ ಸರ್ಕಾರಿ ಜಮೀನನ್ನು ವಸತಿ ನಿವೇಶನಕ್ಕೆ ಕಾಯ್ದಿರಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಸ್ತಾವ  ಸಲ್ಲಿಸಬೇಕು. ಸದರಿ ಜಮೀನಿನನ್ನು ಅಧಿಕಾರಿಗಳು ವಸತಿ ನಿವೇಶನಕ್ಕೆ ಕಾಯ್ದಿರಿಸಲು ತಹಶೀಲ್ದಾರರವರಿಗೆ ಪತ್ರ ಬರೆದು ಅದರ ಪ್ರತಿಯನ್ನು ಜಿಲ್ಲಾ ಪಂಚಾಯಿತಿಗೆ ಕಳುಹಿಸಿ’ ಎಂದು ಸೂಚನೆ ನೀಡಿದರು.

ಜಿಲ್ಲಾ ‍ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ್ ಅಡವಿಮಠ ಮಾತನಾಡಿ, ಕರ ವಸೂಲಾತಿ ಹೆಚ್ಚಿನ ಪ್ರಮಾಣದಲ್ಲಿ ಮಾಡಲು ನಿರ್ದೇಶನ ನೀಡಿ, ಪ್ರಸಕ್ತ ಸಾಲಿನ ಡಿಸೆಂಬರ್‌ ಅಂತ್ಯದವರೆಗೆ ಶೇ 100ರಷ್ಟು ಪ್ರಗತಿ ಸಾಧಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೃಷ್ಣರಾಜು ಮಾತನಾಡಿ, ‘ಸಾಮಾಜಿಕ ಲೆಕ್ಕ ಪರಿಶೀಲನಾ ಶುಲ್ಕ ₹20 ಸಾವಿರಗಳನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿ ಪ್ರತಿ ವರ್ಷ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡುವುದು ಹಾಗೂ ಮನರೇಗಾ ಮತ್ತು 15ನೇ ಹಣಕಾಸು ಯೋಜನೆಯ ಕಡತಗಳನ್ನು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಕಡ್ಡಾಯವಾಗಿ ಒದಗಿಸುವುದು ಮುಖ್ಯ. ಒಂದು ವೇಳೆ ಕಡತ ನೀಡದಿದ್ದ  ಪಕ್ಷದಲ್ಲಿ ಅವ್ಯವಹಾರ ನಡೆದಿದೆ ಎಂದು ಭಾವಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಮಾತನಾಡಿ, ‘ಜಿಲ್ಲೆಯ ಆಯ್ದ ತಾಲ್ಲೂಕಿನ ಸುಮಾರು 51 ಗ್ರಾಮ ಪಂಚಾಯಿತಿಗಳಿಗೆ ಶಿಕ್ಷಣ ಫೌಂಡೇಷನ್‌ನಿಂದ ಗ್ರಂಥಾಲಯಕ್ಕೆ ಅಗತ್ಯ ಸಾಮಾಗ್ರಿಗಳನ್ನು ಪೂರೈಕೆ ಮಾಡಲಾಗಿದೆ. ಅದರಲ್ಲಿ 49 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಇಂಟರ್‌ನೆಟ್ ಸಂಪರ್ಕವಿಲ್ಲ. 5 ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲ. ಪಿಡಿಒಗಳು ನಿಗಾ ವಹಿಸಿ ಎರಡು ದಿನಗಳ ಒಳಗಾಗಿ ಸಮಸ್ಯೆಯನ್ನು ಬಗೆಹರಿಸಿ, ವರದಿ ಸಲ್ಲಿಸಬೇಕು’ ಎಂದರು.

ಬರಗಾಲ ಹಾಗೂ ಚುನಾವಣೆ ಎರಡನ್ನೂ ಜವಾಬ್ದಾರಿಯುತವಾಗಿ ನಿರ್ವಹಿಸಿ, ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡಿರುವುದು ಹಾಗೂ ಸ್ವೀಪ್ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚಾಗಿರುವುದಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಗೆ ರಾಹಲ್ ಶಿಂಧೆ ಅಭಿನಂದನೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT