ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಪಶ್ಚಿಮ ಬಂಗಾಳದ ಪಂಜಿಪಾಡಾದಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧ, ಚಿಕ್ಕೋಡಿ ತಾಲ್ಲೂಕಿನ ಯಡೂರವಾಡಿಯ ಸೂರಜ್ ಧೋಂಡಿರಾಮ ಸುತಾರ (30) ಮೃತಪಟ್ಟಿದ್ದಾರೆ.
ಈ ಯೋಧ ಪತ್ನಿ ಸಮೇತರಾಗಿ ಆಟೊದಲ್ಲಿ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದರು. ಆಟೊದಿಂದ ಇಳಿಯುವ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆಯಿತು. ಅದರ ಚಕ್ರಕ್ಕೆ ಸಿಲುಕಿ ಯೋಧ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
2012ರಲ್ಲಿ ಅವರು ಬಿಎಸ್ಎಫ್ಗೆ ಸೇರಿದ್ದರು. ಅವರ ಸಾವಿನ ಸುದ್ದಿ ಮಂಗಳವಾರ ತಿಳಿದಿದ್ದರಿಂದ ಯಡೂರವಾಡಿಯಲ್ಲಿ ನೀರವ ಮೌನ ಆವರಿಸಿತು.
ಸೂರಜ್ ಅವರಿಗೆ ತಂದೆ, ಪತ್ನಿ, ಪುತ್ರಿ ಇದ್ದಾರೆ. ದೆಹಲಿ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬುಧವಾರ (ಜುಲೈ 20) ಬೆಳಿಗ್ಗೆ ಪಾರ್ಥಿವ ಶರೀರ ತರಲಾಗುವುದು. ನಂತರ ಯಡೂರವಾಡಿಯಲ್ಲಿ ಸಕಲ ಸರ್ಕಾರಿ ಗೌರವದಂತೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.