ಸವದತ್ತಿ: ಸಮೀಪದ ಜೋಗುಳಬಾವಿ ಸತ್ಯಮ್ಮ ದೇವಸ್ಥಾನದ ಬಳಿಯ ಜೋಗುಳಬಾವಿಯಲ್ಲಿ ಶುಕ್ರವಾರ ಸ್ನಾನಕ್ಕೆಂದು ತೆರಳಿದ ವ್ಯಕ್ತಿ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ. ರಾತ್ರಿಯಾದರೂ ಅವರ ಸುಳಿವು ಸಿಗಲಿಲ್ಲ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸಂಡ ಗ್ರಾಮದ ವಿನಾಯಕಸಿಂಗ್ ರಜಪೂತ (35) ನೀರು ಪಾಲಾದವರು.
ವಿನಾಯಕ ಸಿಂಗ್ ಅವರು ಶ್ರಾವಣ ಮಾಸದ ಪೂಜೆಗಾಗಿ ಕುಟುಂಬ ಸಮೇತರಾಗಿ ಯಲ್ಲಮ್ಮನ ಗುಡ್ಡ ಮತ್ತು ಸತ್ಯಮ್ಮ ದೇವಸ್ಥಾನಗಳಿಗೆ ಬಂದಿದ್ದರು. ದೇವಾಲಯಗಳಿಗೆ ತೆರಳುವ ಮೊದಲು ಜೋಗುಳ ಬಾವಿಯಲ್ಲಿ ಸ್ನಾನ ಮಾಡುವುದು ವಾಡಿಕೆ. ಹೀಗೆ ಸ್ನಾನಕ್ಕೆ ಇಳಿದ ವಿನಾಯಕ ಸಿಂಗ್ ಬಾವಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಈಜಿಕೊಂಡು ಹೋದರು. ಮರಳಿ ಬರುವಾಗ ಈಜಲಾರದೇ ಮಧ್ಯದಲ್ಲೇ ಮುಳುಗಿದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಈಜುಗಾರರ ನೆರವಿನೊಂದಿಗೆ ಹುಡುಕಾಟ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.