ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ ಪೂರ್ವಯೋಜಿತವಾಗಿದೆ. ಇದು ಹೊಸದೇನಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉಪ ಚುನಾವಣೆ ಬಂದಿರುವ ಈ ಸಂದರ್ಭದಲ್ಲಿ ನಮ್ಮನ್ನು ಡಿಸ್ಟರ್ಬ್ ಮಾಡಲು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಹಲವು ಬಾರಿ ನಾವು ಆರೋಪ ಮಾಡಿದ್ದೇವೆ. ಉಪ ಚುನಾವಣೆ ಸಂದರ್ಭದಲ್ಲಿ ನಮಗೆ ತೊಂದರೆ ಕೊಡುವ ಉದ್ದೇಶದಿಂದಲೇ ದಾಳಿ ನಡೆದಿದೆ. ಅಧ್ಯಕ್ಷರೊಬ್ಬರ ಮೇಲೆ ದಾಳಿ ಮಾಡಿದರೆ ಏನೂ ಆಗುವುದಿಲ್ಲ. ಪಕ್ಷ ದೊಡ್ಡದು. ನಮ್ಮನ್ನು ಹೆದರಿಸಲು ಸಾಧ್ಯವಿಲ್ಲಎಂದು ಹೇಳಿದ್ದಾರೆ.
ಶಿವಕುಮಾರ್ ಸಮರ್ಥರಾಗಿದ್ದಾರೆ. ಅವರು ಅದನ್ನು ಫೇಸ್ ಮಾಡುತ್ತಾರೆ. ಅವರ ಅದ್ಯಕ್ಷತೆಯಲ್ಲಿ ಪಕ್ಷ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಸಮರ್ಥರಿದ್ದಾರೆ ಎದುರಿಸುತ್ತಾರೆ
ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ಮಾಡಿರುವ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಉಪ ಚುನಾವಣೆ ಸಂದರ್ಭದಲ್ಲಿ ಈ ರೀತಿ ದಾಳಿ ಮಾಡಿಸಿದ್ದಾರೆ ಎಂದು ದೂರಿದರು.
ಇದನ್ನು ನಮ್ಮ ನಾಯಕರು ಸಮರ್ಥವಾಗಿ ಎದುರಿಸುತ್ತಾರೆ. ಇಡಿ (ಜಾರಿ ನಿರ್ದೇಶನಾಲಯ) ಆಯ್ತು, ಐಟಿ (ಆದಾಯ ತೆರಿಗೆ) ದಾಳಿ ಆಗಿತ್ತು. ಈಗ ಸಿಬಿಐ ಅಧಿಕಾರಿಗಳಿಂದ ದಾಳಿ ಮಾಡಲಾಗುತ್ತಿದೆ. ಉಪ ಚುನಾವಣೆ ವೇಳೆ ದಾಳಿಯ ಉದ್ದೇಶ ಏನು ಎಂದು ಪ್ರಶ್ನಿಸಿದರು
ಕಾನೂನಿನ ಮೇಲೆ ನಮಗೆ ನಂಬಿಕೆ ಇದೆ. ಕಾನೂನಿಗೆ ಪ್ರತಿಯೊಬ್ಬರೂ ತಲೆ ಬಾಗಲೇಬೇಕು. ನಮ್ಮ ನಾಯಕರು ಇದೆಲ್ಲವನ್ನೂ ಕಾನೂನು ಮೂಲಕವೇ ಸಮರ್ಥವಾಗಿ ಎದುರಿಸುತ್ತಾರೆ ಎಂದು ಹೇಳಿದರು.