ಬೆಳಗಾವಿ: ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಮತ್ತು ಉಪಾಧ್ಯಕ್ಷ ಅರುಣ ಕಟಾಂಬಳೆ ಬುಧವಾರ ನೆರವೇರಿಸಿದರು.
ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಪಟುಗಳಾದ ತುಷಾರ್ ಭೇಕನೆ, ಕಿರಣ ಲೋಹಾರ, ಶ್ರೀನಾಥ ಆಣಿ, ಮುಕುಲ್ ಜುವೇಕರ್ ಕ್ರೀಡಾ ಜ್ಯೋತಿ ತಂದರು. ಕ್ರೀಡಾಪಟುಗಳ ಪರವಾಗಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಪಟು ಶಿವಪ್ರಸಾದ ಮಂತುರಗಿಮಠ ಪ್ರತಿಜ್ಞಾವಿಧಿ ಬೋಧಿಸಿದರು.
‘ಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವದ್ದೇ ಹೊರತು, ಸೋಲು–ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಶಿಸ್ತು, ಸಮಯವನ್ನು ಪಾಲಿಸಬೇಕು. ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಬೇಕು’ ಎಂದು ಆಶಾ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ. ಶ್ರೀನಿವಾಸ್ ಸ್ವಾಗತಿಸಿದರು. ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ನಿರೂಪಿಸಿದರು. ಸೈಕ್ಲಿಂಗ್ ಕೋಚ್ ಎಂ.ಪಿ. ಮರನೂರ ವಂದಿಸಿದರು.
ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಕೊಕ್ಕೊ, ಫುಟ್ಬಾಲ್, ಹಾಕಿ, ಹ್ಯಾಂಡ್ಬಾಲ್, ಥ್ರೋಬಾಲ್ ಮೊದಲಾದ ಸ್ಪರ್ಧೆಗಳಲ್ಲಿ ತಾಲ್ಲೂಕುಮಟ್ಟದಲ್ಲಿ ವಿಜೇತರಾದ ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದರು.