ಕೌಜಲಗಿ: ‘ರೈತರ ಕಬ್ಬಿನ ಬಾಕಿ ₹ 21 ಕೋಟಿ ಪಾವತಿಸಲು ಬಾಗಲಕೋಟೆ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಬೇಕು’ ಎಂದು ರೈತ ಮುಖಂಡ ಅರವಿಂದ ದಳವಾಯಿ ಒತ್ತಾಯಿಸಿದರು.
ಇಲ್ಲಿನ ದಳವಾಯಿ ತೋಟದಲ್ಲಿ ನಡೆದ ಸಾವರಿನ್ ಶುಗರ್ಸ್ಗೆ ಕಬ್ಬು ಪೂರೈಸಿದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಾವರಿನ್ ಕಾರ್ಖಾನೆಯ ಚರಾಸ್ತಿ-ಸ್ಥಿರಾಸ್ತಿಗಳನ್ನು ಬ್ಯಾಂಕಿನವರು ವಶಪಡಿಸಿದ್ದಾರೆ. ರೈತರ ಕಬ್ಬಿನ ಬಾಕಿ ಹಣ ಪಾವತಿಸಿದ ಮೇಲೆ ಕಾರ್ಖಾನೆ ಆಸ್ತಿ ಹರಾಜು ಮಾಡಲು ಬಾಗಲಕೋಟೆ ಜಿಲ್ಲಾಧಿಕಾರಿ ಆದೇಶಿಸಿದರೂ ಬ್ಯಾಂಕ್ನವರು ಇದುವರೆಗೂ ರೈತರಿಗೆ ಬಾಕಿ ಹಣ ಪಾವತಿಸಿಲ್ಲ. ಇದನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
ರೈತರಿಗೆ ನ್ಯಾಯ ದೊರೆಯಲು ವಿಳಂಬವಾದರೆ ಬೆಂಗಳೂರಿನ ಸಕ್ಕರೆ ಆಯುಕ್ತರ ಕಚೇರಿ ಮುಂದೆ ಸೆ.21ರಂದು ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರೈತ ಮುಖಂಡರಾದ ಗಂಗಾಧರ ಮೇಟಿ, ಶ್ರೀಶೈಲ ಅಂಗಡಿ ಮಾತನಾಡಿದರು. ರೈತರಾದ ರಮಜಾನ್ ಹಕ್ಕಿ, ಸಿದ್ದಪ್ಪ ಸಣ್ಣಕ್ಕಿ, ಶಿವಪ್ಪ ಬಳೋಲದಾರ, ರಾಮಣ್ಣ ಗೂರನವರ ನೀಲಪ್ಪ ಯಲಿಗಾರ, ಈರಪ್ಪ ಸಸಾಲಟ್ಟಿ ಹಾಗೂ ಗೋಕಾಕ, ರಾಯಬಾಗ, ಮುಧೋಳ, ಜಮಖಂಡಿ ಮತ್ತು ಅಥಣಿ ಭಾಗದ ರೈತರು ಪಾಲ್ಗೊಂಡಿದ್ದರು.