ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವರಿಂದ ಕ್ಷುಲ್ಲಕ ರಾಜಕಾರಣ: ಲಕ್ಷ್ಮಿ ಹೆಬ್ಬಾಳಕರ

Last Updated 2 ನವೆಂಬರ್ 2021, 14:23 IST
ಅಕ್ಷರ ಗಾತ್ರ

ಬೆಳಗಾವಿ: ‘ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯಾರು ಏನೇ ಅಪಪ್ರಚಾರ ಮಾಡಿದರೂ ದಾಖಲೆಯ ಪ್ರಗತಿಗೆ ಜನರು ಸಾಕ್ಷಿಯಾಗುತ್ತಿದ್ದಾರೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಅಂಬೇವಾಡಿ ಗ್ರಾಮದಲ್ಲಿ ₹ 4.5 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಅಪಪ್ರಚಾರ ಮಾಡುವವರಿಗೆಲ್ಲ ನಾನು ಉತ್ತರಿಸಬೇಕಾಗಿಲ್ಲ. ಕ್ಷೇತ್ರದ ಜನರಿಗೆ ಉತ್ತರಿಸುತ್ತೇನೆ; ಅವರಿಗೆ ಋಣಿಯಾಗಿರುತ್ತೇನೆ. ನಾನು ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ; ಸಹಕಾರ ನೀಡುತ್ತಿದ್ದಾರೆ. ಆದರೆ, ಕೆಲವರು ಅಭಿವೃದ್ಧಿ ಮಾಡಲಾಗದಿರುವುದಕ್ಕೆ ಕ್ಷೇತ್ರದ ಜನರ ಕ್ಷಮೆ ಕೇಳುವ ಬದಲು ನಮ್ಮ ಬಗ್ಗೆ ಅಸೂಯೆಪಟ್ಟುಕೊಂಡು ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಪರೋಕ್ಷವಾಗಿ ಬಿಜೆಪಿಯವರನ್ನು ಟೀಕಿಸಿದರು.

‘ಪ್ರತಿ ಕಾಮಗಾರಿ ಗುಣಮಟ್ಟದ ಬಗ್ಗೆ ನಿಗಾ ವಹಿಸುತ್ತಿದ್ದೇವೆ. ಜನರೂ ಗಮನಹರಿಸಬೇಕು. ಅತಿಯಾದ ಮಳೆಯಿಂದ ಕೆಲವು ಕಡೆ ರಸ್ತೆ ಹಾಳಾಗಿದೆ. ಗ್ರಾಮೀಣ ಕ್ಷೇತ್ರದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಜಾಸ್ತಿ ಅಗಿದೆಯೋ ಅಲ್ಲೆಲ್ಲ ರಸ್ತೆಗಳು ಹಾಳಾಗಿವೆ. ಆದರೂ ಕೆಲವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮುಖಂಡರಾದಚನ್ನರಾಜ ಹಟ್ಟಿಹೊಳಿ, ಅಮುಲ್ ಬಾತ್ಕಂಡೆ, ವಿಕ್ರಮ್ ತರಳೆ, ಕುಲದೀಪ್ ತರಳೆ, ಬಾಂದುರ್ಗಿ, ಶಿವಾಜಿ ಕಾಂಬಳೆ ಇದ್ದರು.

ಬಳಿಕ, ತಾಲ್ಲೂಕಿನ ಹಿಂಡಲಗಾ ಗ್ರಾಮದ ಸಮರ್ಥ ಕಾಲೊನಿಯಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಲಕ್ಷ್ಮಿ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT