ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಬುಧವಾರ ಆಯೋಜಿಸಿದ್ದ ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರಿಗೆ ಬಿಜೆಪಿಗೆ ಬರುತ್ತೀಯಲ್ಲ?’ ಎಂದು ಕೇಳಿದ ಪ್ರಸಂಗ ನಡೆಯಿತು. ವಿನಯ ಏನನ್ನೂ ಪ್ರತಿಕ್ರಿಯಿಸಿದೆ ಕೈ ಮುಗಿದು ಕುಳಿತರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ವಿನಯ ಕುಲಕರ್ಣಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಆಗ, ‘ಇದೊಂದು ಕೆಲಸ ಮಾಡಿ ಕೊಡಿ’ ಎಂದು ಕೋರಿದ ವಿನಯಗೆ, ಬಿಜೆಪಿಗೆ ಬರುತ್ತೀಯಲ್ಲಾ ಎಂದು ಸಚಿವರು ಹೇಳಿದರು. ಇದನ್ನು ಗಮನಿಸಿದ ಸ್ವಾಮೀಜಿ ನಸುನಕ್ಕು ಸುಮ್ಮನಾದರು.
ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿನಯ, ‘ಬಿಜೆಪಿಗೆ ಬರುವಂತೆ ಜಲಸಂಪನ್ಮೂಲ ಸಚಿವರು ಕರೆದರು. ಆದರೆ, ನಾನು ಅವರಿಗೆ ಕೈಮುಗಿದೆನಷ್ಟೆ’ ಎಂದು ತಿಳಿಸಿದರು.
‘ಬಿಜೆಪಿಗೆ ಸೇರುವ ಬಗ್ಗೆ ಎಲ್ಲಿಯೂ ಚರ್ಚಿಸಿಲ್ಲ. ಆ ಯೋಚನೆಯೂ ಇಲ್ಲ. ಹೊಲದಲ್ಲಿ ಕೃಷಿ ಮಾಡಿಕೊಂಡು ನನ್ನ ಪಾಡಿಗೆ ನಾನಿದ್ದೇನೆ. ಬಿಜೆಪಿ ಸೇರ್ಪಡೆ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ; ಅಭಿಮಾನಿಗಳು ಚರ್ಚಿಸಿಲ್ಲ’ ಎಂದರು.