ಬೆಳಗಾವಿ: ‘ಕಳೆದ ಸಾಲಿನಂತೆ ಈ ಬಾರಿಯೂ ಕೊರೊನಾ ಬಂದೆರಗಿದೆ. ಇದರಿಂದ ದೇಶದೆಲ್ಲೆಡೆ ರಕ್ತದ ಕೊರತೆ ಕಾಡುತ್ತಿದೆ. ಅತ್ಯಂತ ಕಠಿಣ ಮತ್ತು ತುರ್ತು ಸಂದರ್ಭದಲ್ಲಿ ಅವಶ್ಯವಿರುವುದರಿಂದ, ದಾನಿಗಳು ರಕ್ತ ನೀಡಲು ಮುಂದೆ ಬರಬೇಕು’ ಎಂದು ಜೆಎನ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ಹೇಳಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಜೆಎನ್ ವೈದ್ಯಕೀಯ ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಶಸ್ತ್ರಚಿಕಿತ್ಸೆ ನೆರವೇರಬೇಕಾದರೆ ರಕ್ತವು ಅತ್ಯವಶ್ಯವಾಗಿರುತ್ತದೆ. ಅದರಲ್ಲೂ ಹೆರಿಗೆ ಸಂದರ್ಭದಲ್ಲಿ ಹೆಚ್ಚು ಅಗತ್ಯವಿರುತ್ತದೆ. ಕೊರತೆ ನೀಗಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ’ ಎಂದರು.
ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಸಚಿವ ಡಾ.ವಿ.ಎ. ಕೋಠಿವಾಲೆ, ರಕ್ತ ಭಂಡಾರದ ಮುಖ್ಯಸ್ಥ ಡಾ.ಎಸ್.ವಿ. ವಿರಗಿ, ಡಾ.ಮಹಾಂತೇಶ ರಾಮಣ್ಣವರ, ಡಾ.ಅಶ್ವಿನಿ ನರಸಣ್ಣವರ ಉಪಸ್ಥಿತರಿದ್ದರು.