ರಾಯಬಾಗ(ಬೆಳಗಾವಿ ಜಿಲ್ಲೆ): ಇಲ್ಲಿನ ಪಂಚಾಯತ್ರಾಜ್ ಮತ್ತು ಎಂಜಿನಿಯರಿಂಗ್ ಉಪವಿಭಾಗದ ರಾಯಬಾಗ ಕಿರಿಯ ಎಂಜಿನಿಯರ್ ಪಂಡಿತ ವಾಘ ಅವರನ್ನು ಗುತ್ತಿಗೆದಾರ ಮುತ್ತಪ್ಪ ಭಜಂತ್ರಿ ಅವರಿಂದ ₹12 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಮುಗಳಖೋಡದ ಖೇತಗೌಡರ ತೋಟದ ಸರ್ಕಾರಿ ಶಾಲೆಯ ಶೌಚಗೃಹ ನಿರ್ಮಾಣ ಕಾಮಗಾರಿಯ ₹3 ಲಕ್ಷ ಬಿಲ್ ಪಾವತಿಗೆ ಎಂಜಿನಿಯರ್ ಲಂಚ ಕೇಳಿದ್ದರು. ಗುತ್ತಿಗೆದಾರ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ಭರತ ರೆಡ್ಡಿ, ಇನ್ಸ್ಪೆಕ್ಟರ್ಗಳಾದ ನಿರಂಜನ ಪಾಟೀಲ, ಯು.ಎಸ್.ಅವಟಿ, ರವಿಕುಮಾರ ಧರ್ಮಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.