ಬೆಳಗಾವಿ: ಇಲ್ಲಿನ ಅನಗೋಳ ಮತ್ತು ಹಲಗಾ ಗ್ರಾಮಗಳ ಜಮೀನುಗಳನ್ನು ನಿವೇಶನವಾಗಿ ಪರಿವರ್ತಿಸಲು ಬುಡಾ (ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ) ರೂಪಿಸಿರುವ ಯೋಜನೆ (ಸ್ಕೀಂ ನಂ. 52) ವಿರೋಧಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಬುಡಾದಿಂದ ರೈತರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಫಲವತ್ತಾದ ಮತ್ತು ನಮ್ಮ ಬದುಕಿಗೆ ಆಸರೆಯಾಗಿರುವ ಜಮೀನುಗಳನ್ನು ಬಿಟ್ಟು ಕೊಡಲು ವಿರೋಧವಿದೆ’ ಎಂದು ಅವರು ತಿಳಿಸಿದರು.
‘ಬುಡಾ ನೋಟಿಸ್ಗೆ ಜಗ್ಗುವುದಿಲ್ಲ. ನಿವೇಶನಕ್ಕಾಗಿ ಬೇರೆ ಜಮೀನುಗಳನ್ನು ಪಡೆದುಕೊಳ್ಳಬೇಕು. ನಮ್ಮ ಜಮೀನನ್ನು ಪರಿವರ್ತಿಸಲು ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು.
‘ಈ ಜಮೀನುಗಳಲ್ಲಿ ನಾವು ಭತ್ತ, ತರಕಾರಿ ಬೆಳೆದು ಜೀವನ ನಡೆಸುತ್ತಿದ್ದೇವೆ. ಇದನ್ನು ಕಸಿದುಕೊಳ್ಳುವುದು ಸರಿಯಲ್ಲ. ಪ್ರಾಧಿಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುವುದನ್ನು ಸಹಿಸಲಾಗುವುದಿಲ್ಲ. ಕೂಡಲೇ ಯೋಜನೆಯಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.