ಬೆಳಗಾವಿ: ಪ್ರವಾಹ ಪೀಡಿತ ಚಿಕ್ಕೋಡಿಯ ಮಾಂಜರಿ, ಯಡೂರ, ಪ್ರದೇಶಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದರು.
'ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದ ಜಲ ಪ್ರಳಯ ಆಗಿರುವುದನ್ನು ನನ್ನ ಜೀವಮಾನದಲ್ಲಿ ನೋಡಿಯೇ ಇಲ್ಲ. 18 ರಾಜ್ಯಗಳಲ್ಲಿ ಇಂತಹ ಸ್ಥಿತಿ ಇದೆ. ಯಾಕೆ ಭಗವಂತ ಇಷ್ಟೊಂದು ಸಿಟ್ಟಾಗಿದ್ದಾನೋ ಗೊತ್ತಿಲ್ಲ' ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.
ತಾತ್ಕಾಲಿಕವಾಗಿ ₹10,000 ಪರಿಹಾರ ಚೆಕ್ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮನೆ ಹಾನಿಯ ಬಗ್ಗೆ ಸಮೀಕ್ಷೆ ಮಾಡಲಾಗುವುದು. ಪೂರ್ಣಗೊಂಡ ನಂತರ ಪರಿಹಾರ ನೀಡಲಾಗುವುದು ಎಂದರು.
ನಮ್ಮ ಮನೆ ಬಿದ್ದರೂ ಅದನ್ನು ರಿಪೇರಿ ಮಾಡಿಕೊಳ್ಳಲು ಸಮಯ ಬೇಕು. ಇದಕ್ಕೂ ಸ್ವಲ್ಪ ಸಮಯ ಬೇಕಾಗುತ್ತದೆ. ನಿದ್ದೆ ಮಾಡದೇ ಅಧಿಕಾರಿಗಳು ಪರಿಹಾರ ಕಾಮಗಾರಿಗಳಲ್ಲಿ ತೊಡಗಿಕೊಂಡಿದ್ದಾರೆ. ಸಮೀಕ್ಷೆ ಮುಗಿದ ನಂತರ ಮನೆ ಕಟ್ಟಿಕೊಡುತ್ತೇವೆ ಎಂದು ಭರವಸೆಯ ಮಾತನ್ನಾಡಿದರು.
2 ದಿನದ ಸಭೆ: 'ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಸಿಇಒಗಳ 2 ದಿನದ ಸಭೆಯನ್ನು ಭಾನುವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರೆದಿದ್ದೇನೆ' ಎಂದರು.
'ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ವೈಫಲ್ಯವಾಗಿರುವ ಬಗ್ಗೆ 15 ದಿನಗಳೊಳಗೆ ವರದಿ ನೀಡುವಂತೆ ಸಿಇಒಗಳಿಗೆ ಸೂಚಿಸಿದ್ದೇನೆ' ಎಂದು ಹೇಳಿದರು.