ಬೆಳಗಾವಿ: ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಸಂಸ್ಥೆ (ಐಇಇಇ) ಉತ್ತರ ಕರ್ನಾಟಕ ಉಪ ವಿಭಾಗದ ವಾರ್ಷಿಕ ಸಾಮಾನ್ಯ ಸಭೆ (ವರ್ಚುಯಲ್) ಇಲ್ಲಿನ ಕೆಎಲ್ಎಸ್ ಜಿಐಟಿಯಲ್ಲಿ ಭಾನುವಾರ ನಡೆಯಿತು.
‘ಉಪ ವಿಭಾಗವು ಉತ್ತರ ಕರ್ನಾಟಕದ 28 ಎಂಜಿನಿಯರಿಂಗ್ ಕಾಲೇಜುಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮ ವೃತ್ತಿಪರರಿಗೆ ಕಾರ್ಯಾಗಾರಗಳು, ಸ್ಪರ್ಧೆಗಳು, ಸಾಮಾಜಿಕ ಚಟುವಟಿಕೆಗಳು, ತಾಂತ್ರಿಕ ಸಮ್ಮೇಳನಗಳನ್ನು ಆಯೋಜಿಸುತ್ತದೆ. 2020ರಲ್ಲಿ ಜಿಐಟಿಯಲ್ಲಿ ಪ್ರಧಾನ ಕಚೇರಿ ಸ್ಥಾಪಿಸಲಾಗಿದೆ. 85 ವೃತ್ತಿಪರ ಸದಸ್ಯರು ಮತ್ತು 900 ವಿದ್ಯಾರ್ಥಿ ಸದಸ್ಯರು ನೋಂದಾಯಿಸಿದ್ದಾರೆ’ ಎಂದು ತಿಳಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಇಸ್ರೋ ಮುಖ್ಯ ವಿಜ್ಞಾನಿ ಡಾ.ಪುನೀತ್ ಮಿಶ್ರಾ ಮಾರ್ಗದರ್ಶನ ಮಾಡಿದರು.
2021ರ ವಿವಿಧ ಬಹುಮಾನಗಳನ್ನು ಘೋಷಿಸಲಾಯಿತು.
ಅತ್ಯುತ್ತಮ ವಿದ್ಯಾರ್ಥಿ ಶಾಖೆ- ಬಾಗಲಕೋಟೆ ಎಂಜಿನಿಯರಿಂಗ್ ಕಾಲೇಜು, ಅತ್ಯುತ್ತಮ ಶಾಖೆಯ ಸಲಹೆಗಾರರು- ಜಿಐಟಿಯ ಪ್ರೊ.ಅಭಿಷೇಕ ದೇಶಮುಖ್, ಅತ್ಯುತ್ತಮ ವಿದ್ಯಾರ್ಥಿ ಸ್ವಯಂಸೇವಕ- ಕೆಎಲ್ಇ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನ ರಾಶಿ ಶ್ರೀವಾಸ್ತವ, ಅತ್ಯುತ್ತಮ ಅಧ್ಯಾಪಕ ಸ್ವಯಂಸೇವಕ ಬಹುಮಾನವನ್ನು ಹುಬ್ಬಳ್ಳಿಯ ಕೆಎಲ್ಇ ಐಟಿಯ ಪ್ರೊ.ರವಿ ಹೊಸಮನಿ ಅವರಿಗೆ ನೀಡಲಾಯಿತು. ಹುಬ್ಬಳ್ಳಿಯ ಕೆಎಲ್ಇ ಐಟಿಯ ಪ್ರಾಚಾರ್ಯ ಡಾ.ಬಸವರಾಜ ಅನಾಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ.ಬಸವರಾಜ ಅನಾಮಿ (ಅಧ್ಯಕ್ಷ), ಪ್ರೊ.ಅಭಿಷೇಕ ದೇಶಮುಖ (ಉಪಾಧ್ಯಕ್ಷ), ಪ್ರೊ.ರವಿ ಹೊಸಮನಿ (ಕಾರ್ಯದರ್ಶಿ) ಹಾಗೂ ಡಾ.ರುದ್ರೇಶ ಮಗದುಮ್ (ಖಜಾಂಚಿ) ಅವರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಬಿಇಸಿ ಬಾಗಲಕೋಟೆಯ ಎನ್ಕೆಎಸ್ಎಸ್ ನಿಕಟಪೂರ್ವ ಅಧ್ಯಕ್ಷ ಡಾ.ಎಸ್.ಎಚ್. ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆಯ ಪ್ರೊ.ಜಿಗಜಿನ್ನಿ ಸ್ವಾಗತಿಸಿದರು. ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಅನಾಮಿ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು. ಕೆಎಲ್ಎಸ್ ಜಿಐಟಿಯ ಪ್ರೊ.ಅಭಿಷೇಕ ದೇಶಮುಖ ಲೆಕ್ಕಪತ್ರಪರಿಶೋಧನಾ ವರದಿ ಮಂಡಿಸಿದರು. ಎಚ್ಒಡಿ ಇಇ ಡಾ.ಡಿ.ಬಿ. ಕುಲಕರ್ಣಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.