ತೆಲಸಂಗ: ‘ಎರಡು ವರ್ಷಗಳಿಂದ ಕೋವಿಡ್ ವೈರಾಣು ಹರಡುವಿಕೆ, ಪ್ರಕೃತಿ ವಿಕೋಪದಂತಹ ದೊಡ್ಡ ಸಮಸ್ಯೆಗಳ ನಡುವೆಯೂ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಹಣ ತಂದ ಶಾಸಕರಲ್ಲಿ ಮೊದಲಿಗನಾಗಿದ್ದಕ್ಕೆ ಹೆಮ್ಮೆ ಇದೆ’ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಇಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಜನರ ಸಮಸ್ಯೆ ನಿವಾರಣೆ ಮತ್ತು ಕ್ಷೇತ್ರದ ಅಭಿವೃದ್ಧಿಯಷ್ಟೆ ನನ್ನ ಮುಖ್ಯ ಗುರಿಯಾಗಿದೆ. ಗ್ರಾಮದಲ್ಲಿ ₹ 40 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗ ₹ 5 ಲಕ್ಷ ವೆಚ್ಚದಲ್ಲಿ ಮಹಾತ್ಮ ಗಾಂಧಿ ಶಾಲೆಯ ಕೊಠಡಿ, ₹ 5 ಲಕ್ಷದಲ್ಲಿ ಸತ್ಯ ಸಂತೃಪ್ತ ಜೀವ ದೈವ ಜ್ಯೋತಿ ಸಂಸ್ಥೆಯ ಶಾಲಾ ಕೊಠಡಿ, ₹ 5 ಲಕ್ಷದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪ ಸಮುದಾಯ ಭವನ ಮತ್ತು ₹ 5 ಲಕ್ಷದಲ್ಲಿ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ಶಾಲಾ ಕೊಠಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.
ಹಿರೇಮಠದ ವೀರೇಶ್ವರ ದೇವರು, ವಿವೇಕಾನಂದ ಹಳಿಂಗಳಿ ಮಹಾರಾಜರು, ಜಿ.ಪಂ. ಎಇಇ ವೀರಣ್ಣ ವಾಲಿ, ಅನಿಲ ಪವಾರ, ತಾ.ಪಂ. ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಗ್ರಾ.ಪಂ. ಅಧ್ಯಕ್ಷ ವಿಲಾಸ ಮೋರೆ, ಮಾಜಿ ಸೈನಿಕ ಮಹಾದೇವ ಬಾಣಿ ಇದ್ದರು.