ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಜನರು, ಬಗೆಬಗೆಯ ವಿನ್ಯಾಸಗಳ ಪತಂಗಗಳ ಹಾರಾಟ ಕಂಡು ಖುಷಿಪಟ್ಟರು. ತಮ್ಮ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಉತ್ಸವದ ಕ್ಷಣಗಳನ್ನು ಸೆರೆಹಿಡಿದು ಸಂಭ್ರಮಿಸಿದರು.
ಇಂಡೋನೆಷ್ಯಾ, ಯುನೈಟೆಡ್ ಕಿಂಗಡಮ್, ಸ್ಲೋವೆನಿಯಾ, ನೆದರ್ಲ್ಯಾಂಡ್ನ 6 ಮಂದಿ ಆಟಗಾರರು ಹಾಗೂ ವಿವಿಧ ರಾಜ್ಯಗಳಿಂದ ಬಂದಿದ್ದ 37 ಆಟಗಾರರು ಡ್ರ್ಯಾಗನ್ ಕೈಟ್, ರಿಂಗ್ ಕೈಟ್, 40 ಅಡಿಯ ಫಿಷ್ ಕೈಟ್, ಸ್ಟಾರ್ ಕೈಟ್ ಮತ್ತಿತರ ಪತಂಗ ಹಾರಿಸಿದರು.
‘ಈಗ ಬೆಳಗಾವಿಯಲ್ಲಿ ನಡೆಯುತ್ತಿರುವುದು 14ನೇ ಆವೃತ್ತಿಯ ಗಾಳಿಪಟ ಉತ್ಸವ. ನಾನು ಮೊದಲ ಉತ್ಸವದಿಂದಲೂ ಭಾಗವಹಿಸುತ್ತಿದ್ದೇನೆ. ಬೆಳಗಾವಿಯಲ್ಲಿನ ಗಾಳಿಪಟ ಉತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ಬೆಂಗಳೂರಿನ ಆಟಗಾರ ವಿ.ಕೃಷ್ಣಾಜಿ ರಾವ್ ಹೇಳಿದರು.
‘ಅಯೋಧ್ಯೆಯಲ್ಲಿ ಹೊಸ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಮನ ಭಾವಚಿತ್ರವಿರುವ ಪತಂಗ ಹಾರಿಸಿದ್ದೇನೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ’ ಎಂದು ಬೆಳಗಾವಿಯ ಆಟಗಾರ ಸಂದೇಶ ಕಡ್ಡಿ ತಿಳಿಸಿದರು.
ಗಾಳಿಪಟ ಉತ್ಸವ ಅಂಗವಾಗಿ ಆಯೋಜಿಸಿದ್ದ ಉಮಂಗ್ ಯುವಜನೋತ್ಸವವನ್ನು ಕಿರಣ ಕುಲಕರ್ಣಿ ಉದ್ಘಾಟಿಸಿದರು. ರಾಜ್ಯ ಹಾಗೂ ಹೊರರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಪ್ರತಿಭೆ ಅನಾವರಣಗೊಳಿಸಿದರು.