ನಿಪ್ಪಾಣಿ: ‘ಮಕ್ಕಳ ಸರ್ವಾಂಗೀಣ ವಿಕಾಸವೇ ಕೆ.ಎಲ್.ಇ. ಸಂಸ್ಥೆಯ ಗುರಿ. ಸಂಸ್ಥೆ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಪ್ರತಿ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ’ ಎಂದು ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಅಮರ ಬಾಗೇವಾಡಿ ಹೇಳಿದರು.
ಹೊಸ ವರ್ಷದ ಅಂಗವಾಗಿ ಸೋಮವಾರ ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಆಹಾರ ಮೇಳ, ಮನೋರಂಜನಾ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮಗಳಲ್ಲಿ ‘ಆಹಾರ ಮೇಳ’ ಕಾರ್ಯಕ್ರಮ ಎಲ್ಲರನ್ನು ಮನಸೂರೆಗೊಳಿಸಿತು. ಮಕ್ಕಳು ವಿವಿಧ ಬಗೆಯ ರುಚಿರುಚಿಯ ಆಹಾರಗಳನ್ನು ತಯಾರಿಸಿದ್ದರು.
ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥ ಡಾ.ಪ್ರಮೋದ ಗಾಡವೆ, ಪಿ.ಐ. ಪಾಟೀಲ, ಬಸನಗೌಡ ಪಾಟೀಲ, ಡಾ. ಮಹಾಂತೇಶ ಮುರಳಿ, ಹೇಮಲತಾ ಚಿಕ್ಕಮಠ ಇದ್ದರು. ಶಿಕ್ಷಕಿ ರೋಹಿನಿ ಪೂಜಾರ ನಿರೂಪಿಸಿದರು.