ಕೌಜಲಗಿ: ಪಟ್ಟಣದ ಬಸವೇಶ್ವರ ರಥೋತ್ಸವವು ಶನಿವಾರ ಭಕ್ತರ ಹರ್ಷೋದ್ಘಾರದೊಂದಿಗೆ ಸಂಭ್ರಮದಿಂದ ನೆರವೇರಿತು.
ಯುಗಾದಿ ಅಂಗವಾಗಿ ನಡೆಯುವ ಈ ಜಾತ್ರೆಗೆ ಕೌಜಲಗಿ, ಗೋಸಬಾಳ, ಮನ್ನಿಕೇರಿ, ಕಳ್ಳಿಗುದ್ದಿ, ಬಿಲಕುಂದಿ ಹೊನಕುಪ್ಪಿ, ಕುಲಗೋಡ, ರಡ್ಡೇರಹಟ್ಟಿ ಮೊದಲಾದ ಗ್ರಾಮ ನೂರಾರು ಮಂದಿ ಭಾಗವಹಿಸಿದ್ದರು.
ಮುಂಜಾನೆ ಬಸವೇಶ್ವರ ಕರ್ತೃ ಗದ್ದುಗೆಗೆ ಮಹಾಭಿಷೇಕ ನೆರವೇರಿತು. ಬಳಿಕ ಗೋ ಪೂಜೆ ನಡೆಯಿತು. ನಂತರ ಚಂದ್ರಯ್ಯ ನೀಲಕಂಠಯ್ಯ ಹಿರೇಮಠ ಅವರ ಮನೆಯಿಂದ ರಥದ ಕಳಸವನ್ನು ಭವ್ಯ ಮೆರವಣಿಗೆಯ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು. ಕಳಸವನ್ನು ಕುಶಲಕರ್ಮಿಗಳು ರಥದ ತುದಿಗೆ ಜೋಡಿಸಿದರು. ಮಾಲೆ, ಬಣ್ಣದ ಬಟ್ಟೆಗಳು, ಬಾಳೆ ಕಂದು ಹಾಗೂ ಛತ್ರ ಚಾಮರಗಳಿಂದ ಐದು ಅಂಕದ ಕಂಬದ ತೇರನ್ನು ಅಲಂಕರಿಸಲಾಗಿತ್ತು. ಸಂಜೆ ರಥೋತ್ಸವದಲ್ಲಿ ಹರಹರ ಮಹಾದೇವ ಘೋಷಣೆ ಮೊಳಗಿತು.
ಪೇಟೆಯ ಬಸವೇಶ್ವರ ದೇವಸ್ಥಾನದಿಂದ ಶಿವನಮಾರಿ ಹೊಟೇಲ್, ಜಂಗ್ಲಿಸಾಬ ದರ್ಗಾ, ಜಾಂಬೋಟಿ-ರಬಕವಿ ರಾಜ್ಯ ಹೆದ್ದಾರಿ–54ರ ಸಮೀಪದ ಪಾದಗಟ್ಟೆವರೆಗೆ ರಥೋತ್ಸವ ನಡೆಯಿತು. ಭಕ್ತರು ಬಾಳೆಹಣ್ಣು, ಕಾರಿಕು, ಬೆಂಡು-ಬತಾಸು, ನಾಣ್ಯಗಳನ್ನು ರಥಕ್ಕೆ ತೂರಿ ಭಕ್ತಿ ಸಮರ್ಪಿಸಿದರು. ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.