ಹುಕ್ಕೇರಿ: ಸ್ಥಳೀಯ ದಿವಾಣಿ ನ್ಯಾಯಾಲಯದ ಹೆಚ್ಚುವರಿ ಚಾರ್ಜ್ ಅನ್ನು ಬದಲಾವಣೆ ಮಾಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಸ್ಥಳೀಯ ವಕೀಲರ ಸಂಘವು ಸೋಮವಾರ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ಅನೀಸ್ ವಂಟಮೂರಿ ಮತ್ತು ಉಪಾಧ್ಯಕ್ಷ ಬಸವರಾಜ ಜಿನರಾಳಿ ಅವರು ಜಿಲ್ಲಾ ನ್ಯಾಯಾಧೀಶೆ ವಿಜಯಲಕ್ಷ್ಮೀದೇವಿ ಅವರಿಗೆ ಹುಕ್ಕೇರಿ ಹೆಚ್ಚುವರಿ ಚಾರ್ಜ್ ಅನ್ನು ಗೋಕಾಕ ನ್ಯಾಯಾಲಯಕ್ಕೆ ಕೊಟ್ಟಿರುವುದರಿಂದ ಇಲ್ಲಿನ ಕಕ್ಷಿದಾರರಿಗೆ ಮತ್ತು ವಕೀಲರಿಗೆ ಆಗುತ್ತಿರುವ ತೊಂದರೆಯನ್ನು ವಿವರಿಸಿದ್ದಾರೆ.
ಗೋಕಾಕ ಪಟ್ಟಣವು ಹುಕ್ಕೇರಿಯಿಂದ 33 ಕಿ.ಮೀ ಅಂತರದಲ್ಲಿ ಇರುವುದರಿಂದ ವಕೀಲರಿಗೆ ಮತ್ತು ಕಕ್ಷಿದಾರರಿಗೆ ಹೋಗಿ ಬರಲಿಕ್ಕೆ ಅನಾನುಕೂಲ ಆಗುತ್ತಿರುವುದರಿಂದ, ಚಾರ್ಜ್ ಅನ್ನು ಹುಕ್ಕೇರಿಯ ಹಿರಿಯ ದಿವಾಣಿ ನ್ಯಾಯಾಧೀಶರಿಗೆ ಕೊಡುವಂತೆ ಮನವಿ ಮಾಡಿದ್ದಾರೆ.
ಜಿಲ್ಲಾ ನ್ಯಾಯಾಧೀಶರು ಮನವಿಯನ್ನು ಪುರಸ್ಕರಿಸಿ, ಜರೂರಿಯಿದ್ದ ಮುಂದಿನ ಆದೇಶ ನೀಡಲು ಕೋರಿದ್ದಾರೆ.ಹಿರಿಯ ವಕೀಲರಾದ ಡಿ.ಕೆ.ಅವರಗೋಳ, ಭೀಮಸೇನ್ ಬಾಗಿ ಇದ್ದರು.