ಬೆಳಗಾವಿ: ‘ಗಾಂಧೀಜಿ ಅವರ ಆದರ್ಶಮಯವಾದ ಜೀವನಶೈಲಿ ಮತ್ತು ಸ್ವಾವಲಂಬನೆಯ ತತ್ವಗಳು ಪ್ರಸ್ತುತ ಸಮಯದಲ್ಲೂ ಮಹತ್ವದಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ ಹೇಳಿದರು.
ಇಲ್ಲಿನ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಕೂಲ್ ಆಫ್ ಆರ್ಕಿಟೆಕ್ಚರ್ ಪ್ರಾಚಾರ್ಯ ಪ್ರೊ.ಎಚ್.ಎಸ್. ಪಾಟೀಲ, ಎಂಬಿಎ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಇನಾಮದಾರ, ಡಾ.ಸಂಜಯ ಪೂಜಾರಿ, ಡಾ.ಬಿ.ಟಿ. ಸುರೇಶ ಬಾಬು, ಪ್ರೊ.ಸದಾನಂದ ದೊಡಮನಿ, ಡಾ.ರಾಜೇಂದ್ರ ಇನಾಮದಾರ, ಪ್ರೊ.ಕಿರಣ ಪೋತದಾರ, ಡಾ.ವಿಜಯ ಕುಲಕರ್ಣಿ, ಪ್ರೊ.ವಸಂತ ಉಪಾಧ್ಯೆ, ಪ್ರೊ.ಸಾಗರ ಬಿರ್ಜೆ, ದೈಹಿಕ ಶಿಕ್ಷಣ ನಿರ್ದೇಶಕ ವಿಶಾಂತ ಧಮೋಣೆ ಇದ್ದರು.
ಪ್ರೊ.ಎಂ.ವಿ. ಕಂಠಿ ಸ್ವಾಗತಿಸಿದರು. ಪ್ರೊ.ಅಮರ ಬ್ಯಾಕೋಡಿ ವಂದಿಸಿದರು.
‘ವಿಜ್ಞಾನಿಗಳಿಗಿಂತಲೂ ಮಿಗಿಲಾಗಿ ಕಾರ್ಯನಿರ್ವಹಣೆ’
ಬೆಳಗಾವಿ: ‘ಸತ್ಯ, ಪ್ರಾಮಾಣಿಕತೆ, ದೃಢ ನಿರ್ಧಾರದಿಂದ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ. ಈ ಗುಣಗಳನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು’ ಎಂದು ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ಮಹದೇವ ಬಳಿಗಾರ ಹೇಳಿದರು.
ಇಲ್ಲಿನ ಕೆಎಲ್ಇ ಗಿಲಗಂಚಿ ಅರಟಾಳ ಸಂಯುಕ್ತ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಫೋಟೊಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿರು.
‘ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರು ಸರಳ ಜೀವನ, ದೇಶ ಚಿಂತನೆ, ಗ್ರಾಮ ಉದ್ಧಾರದಿಂದ ವಿಜ್ಞಾನಿಗಳಿಗಿಂತಲೂ ಮಿಗಿಲಾಗಿ ಕಾರ್ಯ ನಿರ್ವಹಿಸಿದರು’ ಎಂದು ಸ್ಮರಿಸಿದರು.
ಪ್ರಾಚಾರ್ಯ ರವಿ ಪಾಟೀಲ, ಉಪ ಪ್ರಾಚಾರ್ಯ ಸಿದ್ಧರಾಮ ಗದಗ ಮಾತನಾಡಿದರು. ಚನ್ನಬಸಪ್ಪ ಪಾಗಾದ ಸ್ವಾಗತಿಸಿದರು. ಎಂ. ರಾಮಚಂದ್ರ ನಿರೂಪಿಸಿದರು. ಕಾವೇರಿ ಪಟ್ಟಣ ವಂದಿಸಿದರು.
ಲಿಂಗರಾಜ ಕಾಲೇಜಿಲ್ಲಿ ಆಚರಣೆ
ಬೆಳಗಾವಿ: ಇಲ್ಲಿನ ಕೆಎಲ್ಇ ಲಿಂಗರಾಜ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
‘ಸತ್ಯ ಹಾಗೂ ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಗಾಂಧೀಜಿ ಅವರ ಹೇಳಿದ ಮೌಲ್ಯಗಳು ವಿಶ್ವಮಾನ್ಯ ಎನಿಸಿವೆ’ ಎಂದು ಪ್ರಾಚಾರ್ಯ ಆರ್.ಎಂ. ಪಾಟೀಲ ಹೇಳಿದರು.
‘ಗಾಂಧೀಜಿ ತಮ್ಮ ಸರಳ ನಡೆ-ನುಡಿಗಳಿಂದ ಮತ್ತು ಆದರ್ಶ ವಿಚಾರಗಳಿಂದ ಮಹಾತ್ಮ ಹೇಳಿಸಿಕೊಂಡರು. ಅವರಷ್ಟು ಪ್ರಭಾವ ಬೀರಿದ ನಾಯಕರು ಜಗತ್ತಿನಲ್ಲಿ ಯಾರೂ ಇಲ್ಲ. ಶಾಸ್ತ್ರೀಜಿ ಕೂಡ ದೇಶದ ಸಾರ್ವಭೌಮತ್ವ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದರು’ ಎಂದರು.
ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಸಿದ್ದನಗೌಡ ಪಾಟೀಲ ಮಾತನಾಡಿದರು.
ಪಿಯು ಕಾಲೇಜಿನ ಪ್ರಾಚಾರ್ಯರಾದ ಗಿರಿಜಾ ಹಿರೇಮಠ, ಎನ್ಎಸ್ಎಸ್ ಅಧಿಕಾರಿ ಚನ್ನಪ್ಪಗೋಳ, ಬಿ.ಎಂ. ತೇಜಸ್ವಿ, ಜಿ.ಎಂ. ಶೀಲಿ ಇದ್ದರು.
ಎನ್ಸಿಸಿ ಅಧಿಕಾರಿ ಮಹೇಶ ಗುರುನಗೌಡರ ನಿರೂಪಿಸಿದರು.
ಯೋಗಕ್ಷೇಮ ಕೇಂದ್ರ
ಬೆಳಗಾವಿ: ಇಲ್ಲಿನ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶ್ರೀನಗರದ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಗು. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಿ.ಸಿ. ಮಮದಾಪೂರ, ಎಂ.ಎಂ. ಸಾಲಿಮಠ ದೇಶಭಕ್ತಿ ಗೀತೆಗಳನ್ನು ಹಾಡಿದರು.
ಸಿಬ್ಬಂದಿ ಸುನೀತಾ ಹಿರೇಮಠ, ಸೇವಂತಾ ಡೊಂಗರೆ ಇದ್ದರು.
ಆಪ್ತಸಮಾಲೋಚಕ ಮಹಾವೀರ ಪಾ. ಘುಳನ್ನವರ ನಿರೂಪಿಸಿದರು. ಪರಶುರಾಮ ಗುರಪ್ಪಗೋಳ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.