ಉಗರಗೋಳ (ಬೆಳಗಾವಿ ಜಿಲ್ಲೆ): ಇಲ್ಲಿನ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ 'ಸಪ್ತಪದಿ’ ಯೋಜನೆ ಅಡಿ ಭಾನುವಾರ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು.
ದೇವಸ್ಥಾನ ಆವರಣದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿತ್ತು. ಯಲ್ಲಮ್ಮನ ಸನ್ನಿಧಿಯಲ್ಲಿ 10 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು.
ಈ ಹಿಂದೆ ಕೋವಿಡ್, ಲಾಕ್ಡೌನ್ ಹಾಗೂ ವಿಧಾನ ಪರಿಷತ್ ಚುನಾವಣೆ ಕಾರಣ ವಿವಾಹ ಮಹೋತ್ಸವವನ್ನು ಎರಡು ಬಾರಿ ಮುಂದೂಡಲಾಗಿತ್ತು. ಈಗ ಕೋವಿಡ್ ಹಾವಳಿ ತಗ್ಗಿದ್ದರಿಂದ ಎಲ್ಲ ಕಾರ್ಯಗಳು ಸುಗಮವಾಗಿ ನೆರವೇರಿದವು.
‘ವಧುವಿಗೆ ₹ 40 ಸಾವಿರ ಮೌಲ್ಯದ ಚಿನ್ನದ ತಾಳಿ, ಮೂರು ಚಿನ್ನದ ಗುಂಡುಗಳ ಜತೆಗೆ ಧಾರೆಯ ಸೀರೆ, ರವಿಕೆ ಖರೀದಿಗಾಗಿ ₹ 10 ಸಾವಿರ ಪ್ರೋತ್ಸಾಹಧನ ನೀಡಲಾಗಿದೆ. ವರನಿಗೆ ಪಂಚೆ, ಶರ್ಟ್, ಶಲ್ಯಕ್ಕಾಗಿ ₹ 5 ಸಾವಿರ ನೀಡಲಾಯಿತು.
ಕಾರ್ಯಕ್ರಮವನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು. ಉಗರಗೋಳದ ಮಹಾಂತ ಸ್ವಾಮೀಜಿ, ರಾಮಾರೂಢ ಸ್ವಾಮೀಜಿ, ಗುರ್ಲಹೊಸೂರಿನ ದಂಡಪಾಣಿ ದೀಕ್ಷಿತ, ಪ್ರಸನ್ನ ಸುಂದರೇಶ ದೀಕ್ಷಿತ, ಗಂಗಾಧರ ದೀಕ್ಷಿತ, ಬೆಟಸೂರಿನ ಅಜ್ಜಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೈಲಹೊಂಗಲ ಎಸಿ ಶಶಿಧರ ಇದ್ದರು.
ಯಲ್ಲಮ್ಮನಗುಡ್ಡಕ್ಕೆ ಬಂದ ಭಕ್ತಾದಿಗಳು ನವ ವಧು-ವರರಿಗೆ ಅಕ್ಷತೆ ಹಾಕಿ ಶುಭ ಕೋರಿದರು.