ಮೂಡಲಗಿ: ‘ಉತ್ತರ ಕರ್ನಾಟಕದ ಭಾಷೆ ಬಲು ಚಂದ ಐತ್ರೀ’ ಎಂದು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಖುಷಿ ಹಂಚಿಕೊಂಡಿದ್ದ ಪ್ರಸಂಗವನ್ನು ತಾಲ್ಲೂಕಿನ ಮುನ್ಯಾಳ ಗ್ರಾಮದ ಗಾಯಕ ಬಸವರಾಜ ಮುಗಳಖೋಡ ನೆನೆದರು.
‘2016ರಲ್ಲಿ ಈ ಟಿವಿಯಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಆಮಂತ್ರಿತನಾಗಿ ಅವರೊಂದಿಗೆ 2 ಗಂಟೆ ಇರುವ ಅವಕಾಶ ದೊರಕಿತ್ತು. ಅವರು ಶ್ರೇಷ್ಠ ಗಾಯಕ ಎನ್ನುವುದಕ್ಕಿಂತ ಮಾನವೀಯ ಸಂಬಂಧಗಳ ಸೂಕ್ಷ್ಮತೆಗಳನ್ನು ಗಮನಿಸುವಂತಹ ಭಾವಜೀವಿಯಾಗಿದ್ದರು’ ಎಂದರು.
‘ನಾನು ಇವನಾರವ ಇವನಾರವ ಎಂದಿನಿಸದಿರಯ್ಯ, ಇವ ನಮ್ಮವ ನಮ್ಮವ’ ಎಂಬ ಬಸವಣ್ಣವರ ವಚನವನ್ನು ಹಾಡಿದ್ದೆ. ಕೂಡಲೇ ಅವರು ‘ನೀವೂ ನಮ್ಮವ’ ಎಂದು ಅಪ್ಪಿಕೊಂಡಿದ್ದರು. ಆ ಕ್ಷಣ ಮೆರೆಯಲಾಗದು’ ಎಂದು ಭಾವುಕರಾಗಿ ಹೇಳಿದರು.
ಇಲ್ಲಿನ ಜಾನಪದ ಗಾಯಕ ಶಬ್ಬೀರ ಡಾಂ ಸಹ ಬಾಲಸುಬ್ರಹ್ಮಣ್ಯಂ ಅವರೊಂದಿಗೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ 2013ರಲ್ಲಿ ಪಾಲ್ಗೊಂಡಿದ್ದನ್ನು ಮೆಲುಕು ಹಾಕಿದರು.
‘ಎದ್ದು ನಿಂತು ಹೂ ನೀಡಿ ನನ್ನನ್ನು ಸ್ವಾಗತಿಸಿದ್ದರು. ಸಣ್ಣವರು, ದೊಡ್ಡವರು ಎನ್ನುವುದನ್ನು ಅವರು ಪರಿಗಣಿಸುತ್ತಿರಲಿಲ್ಲ. ಗಾಯನದಲ್ಲಿ ಬರುವ ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು’ ಎಂದು ಕವಿಮಾತು ಹೇಳಿದ್ದರು ಎಂದು ಹಂಚಿಕೊಂಡರು.
‘ನಾನು 300 ಕ್ಯಾಸೆಟ್ಗಳಿಗೆ ಹಾಡಿದ್ದೇನೆ ಎಂದಾಗ ಎಸ್ಪಿಬಿ ಅವರು ನನ್ನ ಬೆನ್ನು ತಟ್ಟಿ ಖುಷಿಪಟ್ಟ ಕ್ಷಣ ಮರೆಯಲಾರೆ’ ಎಂದರು.