ಬೆಳಗಾವಿ: ‘ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವುದರಿಂದಾಗಿ ಅಲ್ಲಿಗೆ ರಾಜ್ಯದಿಂದ ಬಸ್ಗಳ ಸಂಚಾರವನ್ನು ಸದ್ಯಕ್ಕೆ ಆರಂಭಿಸುವುದಿಲ್ಲ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಂತರರಾಜ್ಯ ಬಸ್ಗಳ ಕಾರ್ಯಾಚರಣೆ ಪುನರಾರಂಭ ಕುರಿತು ಅನೇಕ ರಾಜ್ಯಗಳಿಗೆ ಪತ್ರ ಬರೆದಿದ್ದೇವೆ. ಆದರೆ, ಮಹಾರಾಷ್ಟ್ರದ ಬಗ್ಗೆ ಇನ್ನೂ ಚಿಂತಿಸಿಲ್ಲ’ ಎಂದರು.
‘ಆಂಧ್ರದಿಂದ ಬಸ್ ಸೇವೆ ಆರಂಭಕ್ಕೆ ಒಪ್ಪಿಗೆ ಬಂದಿದೆ. ತೆಲಂಗಾಣ, ಗೋವಾ, ತಮಿಳುನಾಡು ರಾಜ್ಯಗಳಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ’ ಎಂದು ಹೇಳಿದರು.