ತೆಲಸಂಗ: ಸಮೀಪದ ಕೊಟ್ಟಲಗಿ ಗ್ರಾಮದ ಸಿದ್ದೇಶ್ವರ ಹೂತೋಟದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹೆಚ್ಚುವರಿ ಕೊಠಡಿ ನಿರ್ಮಿಸುಂತೆ ಆಗ್ರಹಿಸಿ ಪಾಲಕರುಮಕ್ಕಳೊಂದಿಗೆ ಶನಿವಾರ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದರು.
ಮುಖಂಡ ರಘುನಾಥ ದೊಡ್ಡನಿಂಗಪ್ಪಗೋಳ ಮಾತನಾಡಿ, ‘ಶಾಲೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳಿದ್ದಾರೆ. 7ನೇ ತರಗತಿಯವರೆಗೆ ಇರುವ ಶಾಲೆಯಲ್ಲಿ ಕೇವಲ 2 ಕೊಠಡಿಗಳು ಮಾತ್ರ ಇವೆ. ಇದರಿಂದ ಮಕ್ಕಳಿಗೆ ಬಯಲಿನಲ್ಲಿ ಪಾಠ ಹೇಳಿಕೊಡುವಂತಾಗಿದೆ. ಮಳೆಗಾಲದಲ್ಲಿ ಮಕ್ಕಳು ಏನು ಮಾಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಶಾಲೆಯ ಅಡುಗೆ ಕೊಠಡಿ ಕೂಡ ದುರಸ್ತಿಯಲ್ಲಿದೆ. ಮಕ್ಕಳಿಗೆ ಬಿಸಿಯೂಟಕ್ಕೆ ತಟ್ಟೆಗಳಿಲ್ಲ’ ಎಂದು ಆರೋಪಿಸಿದರು. ಶಾಲೆಯಲ್ಲಿ ಹೆಚ್ಚುವರಿಯಾಗಿ 5 ಕೊಠಡಿಗಳನ್ನು ನಿರ್ಮಿಸಬೇಕು. ಓರ್ವ ಶಿಕ್ಷಕರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.
ಮುಖ್ಯ ಶಿಕ್ಷಕ ಅಶೋಕ ಜಲವಾದಿಅಥಣಿ ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದರು. ‘ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಕೊಠಡಿ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ’ ಎಂದು ಬಿಇಒ ತಿಳಿಸಿದರು. 2 ತಿಂಗಳಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭಿಸದಿದ್ದರೇ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.