ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ನಿರ್ವಹಣೆಗೆ ಬೇಕಿದೆ ‘ನಿರ್ವಹಣೆ’ಯ ಬಲ

ಅಲ್ಲಲ್ಲಿ ಬಳಕೆಗೆ ಬಾರದಂತಹ ಸ್ಥಿತಿಯಲ್ಲಿವೆ!
Last Updated 29 ಆಗಸ್ಟ್ 2021, 7:54 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ವಾಯುವಿಹಾರಕ್ಕೆ, ವ್ಯಾಯಾಮಕ್ಕೆ ಹಾಗೂ ವಿಶ್ರಾಂತಿಗೆ, ಮಕ್ಕಳ ಆಟಕ್ಕೆ ಅಗತ್ಯವಾಗಿರುವ ಉದ್ಯಾನಗಳ ನಿರ್ವಹಣೆಗೆ ನಿರ್ಲಕ್ಷ್ಯ ವಹಿಸಲಾಗಿದೆ.

ಅಲ್ಲಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿರುವ ಸ್ಥಳೀಯ ಸಂಸ್ಥೆ ನಗರಪಾಲಿಕೆಯು ಸಮರ್ಪಕ ನಿರ್ವಹಣೆಗೆ ಆದ್ಯತೆ ಕೊಡದಿರುವುದರಿಂದಾಗಿ ಬಳಕೆಗೆ ಬಾರದಂತಾದ ಪರಿಸ್ಥಿತಿಯಲ್ಲಿ ಅವು ಇವೆ.

ನಗರಪಾಲಿಕೆಯ ಅಂಕಿ ಅಂಶಗಳ ಪ್ರಕಾರ, ಐದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. 58 ವಾರ್ಡ್‌ಗಳಿವೆ. ಬಹಳಷ್ಟು ಬಡಾವಣೆಗಳಿವೆ. ವಿವಿಧೆಡೆ 108 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳ ಪೈಕಿ ಇತ್ತೀಚೆಗೆ ಅಭಿವೃವೃದ್ಧಿಪಡಿಸಿದ ಪಾರ್ಕ್‌ಗಳ ಸ್ಥಿತಿ ಪರವಾಗಿಲ್ಲ ಎನ್ನುವಂತಹ ರೀತಿಯಲ್ಲಿವೆ. ಹನುಮಾನ್‌ ನಗರದ ಬಾಕ್ಸೈಟ್‌ ರಸ್ತೆಯಲ್ಲಿ ಕೇಂದ್ರ ಪುರಸ್ಕೃತ ‘ಅಮೃತ್’ ಯೋಜನೆಯಲ್ಲಿ ₹ 2.52 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಹೊಸ ಉದ್ಯಾನ ಆಕರ್ಷಿಸುತ್ತಿದೆ. ಅಲ್ಲಿ, ತೆರೆದ ಜಿಮ್, ಯೋಗ ಮಾಡುವುದಕ್ಕೆ ಹಾಗೂ ಮಕ್ಕಳ ಆಟಕ್ಕೆ ಬೇಕಾದ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಅಲ್ಲಿಯೇ ಒಂದು ಕಡೆ ಈಜುಕೊಳ ನಿರ್ಮಿಸಲಾಗಿದೆ. ಆದರೆ, ಅದನ್ನು ಬಳಸುವ ಕೆಲಸ ಇನ್ನೂ ಆರಂಭವಾಗಿಲ್ಲ. ಕೆಲವು ಶೌಚಾಲಯಗಳನ್ನು ವ್ಯವಸ್ಥೆ ಮಾಡಲಾಗಿದೆಯಾದರೂ ಅವುಗಳಿಗೆ ಬೀಗ ಹಾಕಲಾಗಿದೆ.

ಮೂಲಸೌಲಭ್ಯವಿಲ್ಲ

ದಕ್ಷಿಣ ಕ್ಷೇತ್ರದಲ್ಲಿ ಛತ್ರಪತಿ ಶಿವಾಜಿ ಉದ್ಯಾನ ಸೇರಿದಂತೆ ಹಲವು ಉತ್ತಮವಾಗಿವೆ. ವಿವಿಧೆಡೆ ಜಿಮ್‌ ಉಪಕರಣಗಳನ್ನು ಅಳವಡಿಸಲಾಗಿದೆ. ಮಕ್ಕಳಿಗೆ ಆಟೋಪಕರಣಗಳನ್ನೂ ಹಾಕಲಾಗಿದೆ. ಅರಣ್ಯ ಇಲಾಖೆಯು ವಿಟಿಯು ರಸ್ತೆಯಲ್ಲಿ ನಗರ ಉದ್ಯಾನ ಅಭಿವೃದ್ಧಿಪಡಿಸಿದೆ. ಅಲ್ಲಿ ನಿಯಮಿತವಾಗಿ ನಿರ್ವಹಣೆಗೆ ಆದ್ಯತೆ ಕೊಡಬೇಕಾದ ಅಗತ್ಯ ಕಂಡುಬಂದಿದೆ. ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಶೌಚಾಲಯಗಳ ಸೌಲಭ್ಯವಾಗಲಿ ಇಲ್ಲದಿರುವುದು ತೊಡಕಾಗಿ ಪರಿಣಮಿಸಿದೆ.

ಜಾಧವನಗರ, ವಡಗಾವಿ, ಶಾಹೂನಗರ, ಹನುಮಾನ್‌ನಗರ, ಸದಾಶಿವನಗರ, ನೆಹರೂ ನಗರ, ಶಹಾಪುರ, ಅಜಂ ನಗರ, ಮಹಾಂತೇಶ ನಗರ, ರಾಮತೀರ್ಥ ನಗರ, ಶ್ರೀನಗರ, ಎಸ್‌ಪಿಎಂ ರಸ್ತೆ ಮೊದಲಾದ ಕಡೆಗಳಲ್ಲಿ ಉದ್ಯಾನಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಆಟೋಪಕರಣಗಳು ಮುರಿದು ಬಿದ್ದಿವೆ. ಕಾಂಪೌಂಡ್‌ಗಳಿಲ್ಲ. ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲ. ಕೆಲವು ಕಡೆಗಳಲ್ಲಿ ಇಡೀ ಕುಟುಂಬ ಸಮೇತವಾಗಿ ಬಂದು ಕುಳಿತು ಕೆಲ ಹೊತ್ತು ಕಳೆಯಬಹುದಾದ ‘ಆರೋಗ್ಯಕರ ವಾತಾವರಣ’ ಕಾಣದಾಗಿದೆ. ವಡಗಾವಿಯ ಮಕ್ಕಳ ಉದ್ಯಾನ ದುಃಸ್ಥಿತಿಯಲ್ಲಿದೆ. ಆಟಿಕೆ ಸಾಮಗ್ರಿಗಳು ತುಕ್ಕು ಹಿಡಿಯುತ್ತಿವೆ.

ಅಲ್ಲಲ್ಲಿ ದೊಡ್ಡ ದೊಡ್ಡ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಅವುಗಳನ್ನು ನಿರ್ವಹಿಸುವ ಕೆಲಸಕ್ಕೆ ಒಬ್ಬರನ್ನಷ್ಟೆ ನೇಮಿಸಲಾಗಿರುತ್ತದೆ. ಅವರು ಎಲ್ಲ ಕೆಲಸವನ್ನೂ ನೋಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಕೋವಿಡ್ ಕಾರಣದಿಂದಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ, ಉದ್ಯಾನಗಳಿಗೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿರಲಿಲ್ಲ. ಈ ವೇಳೆ ಅವುಗಳ ನಿರ್ವಹಣೆಗೆ ಹೆಚ್ಚಿನ ಗಮನ ನೀಡಲಿಲ್ಲ. ಲಾಕ್‌ಡೌನ್‌ ತೆರವಾದ ನಂತರ, ಜನರು ಮೊದಲಿಗಿಂತಲೂ ಹೆಚ್ಚು ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಸಮೀಪದ ಉದ್ಯಾನ, ತೆರೆದ ಜಿಮ್‌ಗಳತ್ತ ಹೋಗುವುದಕ್ಕೆ ಗಮನಹರಿಸುತ್ತಿದ್ದಾರೆ. ವಾರಾಂತ್ಯಗಳಲ್ಲಿ ಹೆಚ್ಚಿನ ಜನರು ಉದ್ಯಾನಗಳಲ್ಲಿ ಕಾಣಸಿಗುತ್ತಾರೆ. ಹೀಗಾಗಿ, ಅವುಗಳ ಅಭಿವೃದ್ಧಿ, ನಿರ್ವಹಣೆ ಹಾಗೂ ಅಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ನಗರಪಾಲಿಕೆಯು ಒತ್ತು ನೀಡಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತ್ಯಾಜ್ಯ, ಕಳೆ ಗಿಡಗಳು

ಕೆಲವಡೆ ಉದ್ಯಾನವಿದೆ ಎನ್ನುವುದು ಗೊತ್ತೂ ಆಗದಂತಹ ರೀತಿಯಲ್ಲಿ ಅವುಗಳ ಸ್ಥಿತಿ ಇದೆ. ಹಿರಿಯರು ಸೇರಿದಂತೆ ಎಲ್ಲ ವರ್ಗದವರ ವಾಯುವಿಹಾರಕ್ಕೆ, ಮಕ್ಕಳ ಮನರಂಜನೆಗೆ ತಾಣಗಳಾಗಬೇಕಿದ್ದವು ತ್ಯಾಜ್ಯ ಹಾಗೂ ಡೆಬ್ರಿಸ್‌ನಿಂಸ್ ತುಂಬಿರುವುದು ಕಂಡುಬರುತ್ತಿದೆ. ಕತ್ತಲಾಗುತ್ತಿದ್ದಂತೆಯೇ ‘ಅನ್ಯ ಚಟುವಟಿಕೆಗಳಿಗೆ’ ತಾಣವಾಗುತ್ತಿವೆ. ಕಸ, ಬಾಟಲಿಗಳು, ಗಾಜಿನ ಚೂರುಗಳು, ಪ್ಲಾಸ್ಟಿಕ್‌ ತ್ಯಾಜ್ಯ, ಬೀದಿ ನಾಯಿಗಳ ಹಾವಳಿ ಕೆಲವೆಡೆ ಸಾಮಾನ್ಯ ಎನ್ನುವಂತಾಗಿ ಹೋಗಿದೆ. ಕೆಲವು ಉದ್ಯಾನಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವ ಉದಾಹರಣೆಯೂ ಇದೆ.

ದಕ್ಷಿಣ ಮತ ಕ್ಷೇತ್ರ ವ್ಯಾಪ್ತಿಯ ಬಸವೇಶ್ವರ ವೃತ್ತದ ಬಳಿಯ ಮಹಾತ್ಮ ಫುಲೆ ಉದ್ಯಾನದಲ್ಲಿ ವಿಶೇಷ ಮಕ್ಕಳು ಮತ್ತು ಅವರ ಪೋಷಕರಿಗಾಗಿಯೇ ಪ್ರತ್ಯೇಕ ಉದ್ಯಾನ ಅಭಿವೃದ್ಧಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಮತ್ತು ಅವರ ಪರಿಕಲ್ಪನೆಯಂತೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಉದ್ಯಾನ ಮೈದಳೆದಿದೆ.

ಬೀದಿ ದೀಪಗಳ ನಿರ್ವಹಣೆಯಲ್ಲೂ ನಿರ್ಲಕ್ಷ್ಯ

ನಗರದ‍ ಪ್ರಮುಖ ಮೂಲಸೌಕರ್ಯಗಳಲ್ಲಿ ಒಂದಾದ ಬೀದಿ ದೀಪಗಳ ನಿರ್ವಹಣೆಯಲ್ಲೂ ನಿರ್ಲಕ್ಷ್ಯ ಕಂಡುಬರುತ್ತಿದೆ. ನಗರಪಾಲಿಕೆಯ ‘ಕಾಳಜಿಯ ಕೊರತೆ ಹಾಗೂ ನಿರ್ವಹಣೆಯ ಅಂಧತ್ವ’ ದಿಂದಾಗಿ ಬಹುತೇಕ ರಸ್ತೆಗಳಲ್ಲಿ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ರಾತ್ರಿ ವೇಳೆ ಅಲ್ಲಿ ಸಂಚಾರ ದುಸ್ತರ ಎನ್ನುವಂತಹ ಸ್ಥಿತಿ ಇದೆ.

ಬೀದಿದೀಪಗಳು ಬೆಳಗದ ಕಾರಣ ಕತ್ತಲಿನ ಮೆರವಣಿಗೆ ಹೊರಟಿದ್ದ ದೃಶ್ಯಗಳೇ ರಾತ್ರಿ ವೇಳೆ ಕಾಣಸಿಗುತ್ತವೆ. ಹಲವೆಡೆ ವಿದ್ಯುತ್‌ ಕಂಬಗಳಿದ್ದರೂ ದೀಪಗಳಿಲ್ಲ. ದೀಪಗಳು ಬೆಳಗಿದರೂ ಮಂದ ಬೆಳಕು ಇರುತ್ತದೆ. ಅದರಲ್ಲೂ ಪಾದಚಾರಿ ಮಾರ್ಗಗಳಲ್ಲಿ ಮಂದ ಬೆಳಕು ಕೂಡ ಇಲ್ಲದಂತಹ ದುಃಸ್ಥಿತಿ. ಕೆಲವೇ ಕಡೆಗಳಲ್ಲಿ ಬೀದಿದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ.

ವಿದ್ಯುತ್‌ ದೀಪಗಳು ಸರಿ ಇಲ್ಲದಿರುವುದರಿಂದ ಅಕ್ರಮ, ಅವ್ಯವಹಾರ, ಅನಾಹುತ, ಅಪಘಾತ, ಅವ್ಯವಸ್ಥೆ, ಅನೈತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತಿದೆ ಎನ್ನುವ ಮಾತುಗಳೂ ಇವೆ.

***

ಕ್ರಮ ವಹಿಸಲಿ

ಶಾಹೂನಗರದ ಗಣೇಶ ಮಂದಿರದ ಬಳಿ ಉದ್ಯಾನವಿದೆ. ಅಲ್ಲಿಗೆ ಬಹಳಷ್ಟು ಮಂದಿ ಬರುತ್ತಾರೆ. ಆದರೆ, ಅದರ ನಿರ್ವಹಣೆ ಸರಿಯಾಗಿಲ್ಲ. ನಿಯಮಿತವಾಗಿ ಸ್ವಚ್ಛತೆಗೆ ಕ್ರಮ ಕೈಗೊಂಡರೆ ಜನರಿಗೆ ಅನುಕೂಲವಾಗುತ್ತದೆ.

–ಮಹಾಂತೇಶ ಪಾಟೀಲ, ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT