ಬೆಳಗಾವಿ: ವಾಸ್ಕೊ–ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನಲ್ಲಿ ಸೋಮವಾರ ಅಪರಿಚಿತರು ನೀಡಿದ ತಿನಿಸು ತಿಂದು ಪ್ರಜ್ಞೆ ಕಳೆದುಕೊಂಡ 8 ಪ್ರಯಾಣಿಕರ ಪೈಕಿ 6 ಮಂದಿಗೆ ಪ್ರಜ್ಞೆ ಬಂದಿದ್ದು, ಇನ್ನಿಬ್ಬರಿಗೆ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
‘ಮಧ್ಯಪ್ರದೇಶದ ಖಂಡ್ವಾ ಎಂಬ ಊರಿನ ಈ ಎಂಟೂ ಮಂದಿ ಗೋವಾದಲ್ಲಿ ಕಾರ್ಮಿಕರಾಗಿದ್ದು, ಹಬ್ಬದ ಹಿನ್ನೆಲೆಯಲ್ಲಿ ರೈಲಿನ ಜನರಲ್ ಬೋಗಿಯಲ್ಲಿ ಊರಿಗೆ ಹೊರಟಿದ್ದರು. ಅಪರಿಚಿತರು ಕೊಟ್ಟ ಚಾಕೊಲೇಟ್, ಬಿಸ್ಕತ್ತು ಮತ್ತು ಕುರುಕುರೆ ತಿಂದು ಕೆಲವೇ ನಿಮಿಷಗಳಲ್ಲಿ ಅವರು ಪ್ರಜ್ಞೆ ಕಳೆದುಕೊಂಡರು. ಎಷ್ಟು ಹೊತ್ತಾದರೂ ಎಚ್ಚರವಾಗದಿರುವುದು ಕಂಡು ಸಹಪ್ರಯಾಣಿಕರು ನಮಗೆ ಮಾಹಿತಿ ನೀಡಿದರು’ ಎಂದರು ರೈಲ್ವೆ ಪೊಲೀಸರು ತಿಳಿಸಿದರು.
‘ರೈಲು ರಾತ್ರಿ ಬೆಳಗಾವಿಗೆ ತಲುಪುತ್ತಿದ್ದಂತೆಯೇ ಎಂಟೂ ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದೆವು. ಚಿಕಿತ್ಸೆ ಬಳಿಕ 6 ಜನರು ಕಣ್ಣು ತೆರೆದಿದ್ದಾರೆ. ಆದರೆ, ಮಾತನಾಡುವಷ್ಟು ಚೈತನ್ಯವಿಲ್ಲ. ಪ್ರಾಣಾಪಾಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ’ ಎಂದು ರೈಲ್ವೆ ಪಿಎಸ್ಐ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಂಟೂ ಮಂದಿ ಚೇತರಿಸಿಕೊಂಡ ಬಳಿಕ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಗೋವಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರಿಂದ ಪ್ರಕರಣವನ್ನು ಗೋವಾ ಪೊಲೀಸರಿಗೆ ಒಪ್ಪಿಸುವ ವಿಚಾರವಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.