ಬೆಳಗಾವಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಯಲ್ಲಿರುವ ಲಾಕ್ಡೌನ್ಗೆ ಜನರು ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ, ನಗರದಲ್ಲಿ ಸೋಮವಾರ ಜನಸಂಚಾರ ವಿರಳವಾಗಿತ್ತು. ಬಹುತೇಕ ಪ್ರದೇಶಗಳು ಸ್ತಬ್ಧವಾಗಿದ್ದವು.
ದಿನಸಿ ಅಂಗಡಿಗಳು, ಔಷಧಿ ಅಂಗಡಿಗಳು, ಹಣ್ಣಿನ ಅಂಗಡಿಗಳಲ್ಲಿ ಅಲ್ಲಲ್ಲಿ ತೆರೆದಿದ್ದವು. ಒಂದೇ ಕಡೆ ನಿಂತು ಮಾರಲು ಅವಕಾಶ ನೀಡದ್ದರಿಂದ ತರಕಾರಿ ವ್ಯಾಪಾರಸ್ಥರು, ಸೈಕಲ್ ಮೇಲೆ ಅಥವಾ ತಲೆ ಮೇಲೆ ಹೊತ್ತುಕೊಂಡು ಮನೆಮನೆಗಳಿಗೆ ತೆರಳಿ ಮಾರಾಟ ಮಾಡಿದರು.
ಮುಖ್ಯರಸ್ತೆಗಳಲ್ಲಿರುವ ಬಹುತೇಕ ಎಲ್ಲ ಅಂಗಡಿ– ಮುಂಗಟ್ಟುಗಳು ಬಂದ್ ಆಗಿದ್ದವು. ಬಡಾವಣೆಗಳ ಒಳರಸ್ತೆಯಲ್ಲಿರುವ ದಿನಸಿ ಅಂಗಡಿಗಳು ತೆರೆದಿದ್ದವು. ಆದರೆ, ಸ್ಟಾಕ್ ಖಾಲಿಯಾಗಿದ್ದರಿಂದ ಹಲವು ಪದಾರ್ಥಗಳು ದೊರೆಯಲಿಲ್ಲ. ಅಕ್ಕಿ, ಬೇಳಿ ಸೇರಿದಂತೆ ಕೆಲವೇ ಕೆಲವು ಪದಾರ್ಥಗಳು ಲಭ್ಯವಿದ್ದವು. ಕೆಲವು ವ್ಯಾಪಾರಸ್ಥರು ಆಹಾರ ಧಾನ್ಯಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು.
ಸಂಯಮ ಪ್ರದರ್ಶಿಸಿದ ಪೊಲೀಸರು; ಇದುವರೆಗೆ ಲಾಠಿ ಹಿಡಿದು ಆರ್ಭಟ ತೋರುತ್ತಿದ್ದ ಪೊಲೀಸರು, ಬಹಳ ಮಟ್ಟಿಗೆ ಸಂಯಮ ಪ್ರದರ್ಶಿಸಿದರು. ವಾಹನ ಸವಾರರನ್ನು ಹಾಗೂ ಪಾದಚಾರಿಗಳನ್ನು ತಡೆದು ವಿಚಾರಿಸುತ್ತಿದ್ದರು. ತುರ್ತು ಕೆಲಸಗಳಾಗಿರದಿದ್ದರೆ ಮನವರಿಕೆ ಮಾಡಿ ವಾಪಸ್ ಕಳುಹಿಸುತ್ತಿದ್ದರು. ವೈದ್ಯಕೀಯ ಸೇವೆ ನೀಡುವವರು, ಸರ್ಕಾರಿ ಅಧಿಕಾರಿಗಳು ಹಾಗೂ ಮಾಧ್ಯಮದವರ ಸಂಚಾರಕ್ಕೆ ಯಾವುದೇ ತಡೆಯೊಡ್ಡಲಿಲ್ಲ.