ಬೆಳಗಾವಿ: ಡಾಬಾದಲ್ಲಿ ‘ಕೆಲಸ’ ಮಾಡಲು ಬೆಳಗಾವಿಗೆ ಬಂದಿದ್ದ ಮಣಿಪುರ ಮೂಲದ 17 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿ, ಮರಳಿ ಗೂಡು ಸೇರಿಸಲಾಗಿದೆ.
ಮಣಿಪುರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ (ಮಕ್ಕಳ ರಕ್ಷಣೆ ವಿಭಾಗದ) ನಿರ್ದೇಶಕರ ನೇತೃತ್ವದಲ್ಲಿ ಏಳು ಅಧಿಕಾರಿಗಳ ತಂಡವು ಬೆಳಗಾವಿಗೆ ಆಗಮಿಸಿ ಶುಕ್ರವಾರ ಬಾಲಕಿಯನ್ನು ರಕ್ಷಿಸಿತು.
2023ರ ಡಿಸೆಂಬರ್ನಲ್ಲಿ ಮನೆ ಬಿಟ್ಟು ಬಂದ ಬಾಲಕಿ ಹೈದರಾಬಾದ್ಗೆ ತೆರಳಿದ್ದಳು. ಅಲ್ಲಿಂದ ಕೇರಳಕ್ಕೆ ಹೋಗಿ ತಂಡವೊಂದರ ಜತೆ ಕೆಲಸ ಮಾಡಿದ್ದರು. ಕೆಲ ದಿನಗಳ ಹಿಂದೆ ‘ಕರೆಯ ಮೇರೆಗೆ’ ಬೆಳಗಾವಿಗೆ ಬಂದು ಡಾಬಾದಲ್ಲಿ ಕೆಲಸ ಮಾಡಿಕೊಂಡಿದ್ದರು. ತೃತೀಯ ಲಿಂಗಿಯೊಬ್ಬರು ಬಾಲಕಿ ಜತೆಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆ ಬಿಟ್ಟುಹೋದ ಬಾಲಕಿ ಬಗ್ಗೆ ಅವರ ತಾಯಿ ಮಣಿಪುರ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿ ಬೆಳಗಾವಿಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಮಣಿಪುರ ಅಧಿಕಾರಿಗಳು, ಶುಕ್ರವಾರ ರಕ್ಷಿಸಿದರು.
‘ಇಲ್ಲಿನ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಬಾಲಕಿ ವಿಚಾರಣೆ ನಡೆಸಲಾಯಿತು. ಪೊಲೀಸ್ ಭದ್ರತೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಯಿತು. ಮನೆಗೆ ತೆರಳಲು ಬಾಲಕಿ ಒಪ್ಪಿಗೆ ಸೂಚಿಸಿದರು’ ಎಂದು ಅಧಿಕಾರಿಗಳು ಹೇಳಿದರು.
ರಕ್ಷಣಾ ಕಾರ್ಯಾಚರಣೆಗೆ ಬೆಳಗಾವಿ ಡಿಸಿಪಿ ಪಿ.ವಿ.ಸ್ನೇಹಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಕ್ಯಾಂಪ್ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ರುಕ್ಮೀಣಿ ಸಹಕಾರ ನೀಡಿದರು.